ADVERTISEMENT

ಮಸ್ಕಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭ: ಸಂಸದ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 15:13 IST
Last Updated 29 ಸೆಪ್ಟೆಂಬರ್ 2024, 15:13 IST
ಮಸ್ಕಿ ಮೊರಾರ್ಜಿ ವಸತಿ ಶಾಲೆಯಲ್ಲಿ (ಪರಿಶಿಷ್ಟ ಜಾತಿ) ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿದರು
ಮಸ್ಕಿ ಮೊರಾರ್ಜಿ ವಸತಿ ಶಾಲೆಯಲ್ಲಿ (ಪರಿಶಿಷ್ಟ ಜಾತಿ) ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿದರು   

ಮಸ್ಕಿ: ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳು ಪೈಪೋಟಿ ನೀಡುತ್ತಿದ್ದಾರೆ ಎಂದು ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಮೊರಾರ್ಜಿ ವಸತಿ ಶಾಲೆ (ಬಿಸಿಎಂ)ಯ ನೂತನ ಕಟ್ಟಡ ಅಡಿಗಲ್ಲು, ಮೊರಾರ್ಜಿ ವಸತಿ ಶಾಲೆ (ಪರಿಶಿಷ್ಟ ಜಾತಿ)ಯ ಬೋಧೇಕೇತರ ವಸತಿ ಗೃಹಗಳ ಉದ್ಗಾಟನೆ ಹಾಗೂ ರಂಗಮಂದಿರದ ಅಡಿಗಲ್ಲು ಹಾಗೂ ದೇವನಾಂಪ್ರಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಹೆಚ್ಚುವರಿ ಕಟ್ಟಡಗಳ ಉದ್ಘಾಟನೆ ಮಾಡಿ ಮಾತನಾಡಿದರು.

ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಮೊರಾರ್ಜಿ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ ಎಂದರು.

ADVERTISEMENT

ಮಸ್ಕಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಶಿಕ್ಷಣದ ಜೊತೆಗೆ ನೀರಾವರಿಗೂ ಹೆಚ್ಚಿನ ಆದ್ಯತೆಯನ್ನು ಸರ್ಕಾರ ಸ್ಥಳೀಯ ಶಾಸಕ ಆರ್. ಬಸನಗೌಡರ ಕ್ಷೇತ್ರಕ್ಕೆ ನೀಡಿದೆ ಎಂದರು.

ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಮಸ್ಕಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕ ಆರ್. ಬಸನಗೌಡರ ಶ್ರಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ ಅಪಾರವಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ವಿಶೇಷ ಅನುದಾನ ನೀಡಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದರು.

ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸರ್ವೋತೋಮು ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಮಲ್ಲಪ್ಪ. ಕೆ ಯರಗೋಳ, ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಚಿದಾನಂದಪ್ಪ, ಕ್ರೈಸ್ಟ್ ಸಂಸ್ಥೆ ಎಂಜಿನಿಯರ್ ಮಾಲತೇಶ, ಪ್ರಾಚಾರ್ಯರಾದ ಚನ್ನಬಸ್ಸಪ್ಪ, ಸಂಗಮೇಶ ಕೊಳ್ಳಿ, ಗುತ್ತಿಗೆದಾರರಾದ ಶಂಕರಕುಮಾರ ಹಾಸನ, ಸಣ್ಣ ಬೋಗಪ್ಪ ಕಾರಟಗಿ, ಕ್ಯಾಷುಟೆಕ್ ಸಂಸ್ಥೆಯ ವೆಂಕಟೇಶ ಹಜಾರೆ, ಎಂಜನಿಯರ್ ತಿಮ್ಮಣ್ಣ ಸೇರಿದಂತೆ ಇತರರು ಇದ್ದರು.

ಶಿಕ್ಷಕ ಅಮರೇಗೌಡ ಮಾಲಿ ಪಾಟೀಲ ನಿರೂಪಿಸಿದರು. ಶಿಕ್ಷಕ ಮಂಜುನಾಥ, ನಿವೇದಿತಾ ಇತ್ಲಿ, ಹಾಗೂ ರೋಹಿಣ ತಂಡದಿಂದ ನಾಡಗೀತೆ, ರೈತ ಗೀತೆ ಹಾಡಲಾಯಿತು. ಇದೇ ಸಂದರ್ಭದಲ್ಲಿ ಸಂವಿಧಾನ ಪಿಠೀಕೆ ಓದಿಸಿ ಪ್ರತಿಜ್ಞೆ ಸ್ವೀಕರಿಸಲಾಯಿತು.

ಚಾಲನೆ: ₹ 8 ಕೋಟಿ ವೆಚ್ಚದಲ್ಲಿ ಮೊರಾರ್ಜಿ ವಸತಿ ( ಪರಿಶಿಷ್ಟ ಜಾತಿ) ಶಾಲೆಯಲ್ಲಿ ನಿರ್ಮಿಸಲಾದ ಬೊಧಕೇತರ ವಸತಿ ಕೊಠಡಿ ಹಾಗೂ ₹ 1.14 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ದೇವನಾಂಪ್ರಿಯ ಸರ್ಕಾರಿ ಪದವಿ ಕಾಲೇಜಿನ ಹೆಚ್ಚುವರಿ ಕೊಠಡಿ ಉದ್ಘಾಟನೆ ಮಾಡಲಾಯಿತು.

₹ 9 ಕೋಟಿ ವೆಚ್ಚದಲ್ಲಿ ಸಂಸ್ಥೆಯಿಂದ ಮೊರಾರ್ಜಿ ವಸತಿ (ಬಿಸಿಎಂ) ಶಾಲೆಯ ನೂತನ ಕಟ್ಟಡ ಹಾಗೂ ₹ 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೊರಾರ್ಜಿ ವಸತಿ ( ಪರಿಶಿಷ್ಟ ಜಾತಿ) ಶಾಲೆಯಲ್ಲಿ ರಂಗಮಂದಿರಕ್ಕೆ ಅಡಿಗಲ್ಲು ಹಾಕಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.