ADVERTISEMENT

ರಾಯಚೂರು | ಜಾಗವಿಲ್ಲ ಎಪಿಎಂಸಿಗೆ ಈರುಳ್ಳಿ ತರಬೇಡಿ: ಅಧಿಕಾರಿಗಳು

ರಾಯಚೂರಲ್ಲಿ ಈರುಳ್ಳಿ ಖರೀದಿದಾರರ ಕೊರತೆ: ಸಂಕಷ್ಟದಲ್ಲಿ ಬೆಳೆಗಾರರು

ಚಂದ್ರಕಾಂತ ಮಸಾನಿ
Published 27 ಅಕ್ಟೋಬರ್ 2024, 4:51 IST
Last Updated 27 ಅಕ್ಟೋಬರ್ 2024, 4:51 IST
ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ರೈತರು ಈರುಳ್ಳಿ ಒಣ ಹಾಕಿದ್ದಾರೆ / ಚಿತ್ರ: ಶ್ರೀನಿವಾಸ ಇನಾಮದಾರ್
ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ರೈತರು ಈರುಳ್ಳಿ ಒಣ ಹಾಕಿದ್ದಾರೆ / ಚಿತ್ರ: ಶ್ರೀನಿವಾಸ ಇನಾಮದಾರ್   

ರಾಯಚೂರು: ಗಂಜ್‌ ಪ್ರದೇಶದ ಎಪಿಎಂಸಿ ಮಾರುಕಟ್ಟೆಗೆ ರಾಯಚೂರು ತಾಲ್ಲೂಕು ಹಾಗೂ ನೆರೆಯ ಆಂಧ್ರಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಈರುಳ್ಳಿ ಆವಕವಾಗಿದೆ. ಎಪಿಎಂಸಿಯಲ್ಲಿ ಜಾಗದ ಕೊರತೆಯಿಂದಾಗಿ ತಮಗೆ ಅನುಕೂಲವಿರುವ ಪ್ರದೇಶದಲ್ಲೇ ಈರುಳ್ಳಿಯನ್ನು ನೇರವಾಗಿ ಮಾರಾಟ ಮಾಡಿಕೊಳ್ಳುವಂತೆ ರೈತರಿಗೆ ಎಪಿಎಂಸಿ ಅಧಿಕಾರಿಗಳು ಸಲಹೆ ನೀಡಿ ಕಳಿಸುತ್ತಿದ್ದಾರೆ.

ರಾಯಚೂರು ಎಪಿಎಂಸಿಗೆ ಶುಕ್ರವಾರ 4,322 ಚೀಲ ಈರುಳ್ಳಿ ಬಂದಿದೆ. ಎಪಿಎಂಸಿ ಆವರಣದಲ್ಲಿ ಹಸಿ ಈರುಳ್ಳಿ ಒಣ ಹಾಕಲಾಗಿದೆ. ಗೋದಾಮುಗಳಲ್ಲೂ ಈರುಳ್ಳಿ ಚೀಲಗಳನ್ನು ಸಂಗ್ರಹಿಸಿ ಇಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ರೈತರು ಈರುಳ್ಳಿ ಖರೀದಿದಾರರನ್ನು ಹುಡುಕಿಕೊಂಡು ಹೋಗಬೇಕಾಗಿದೆ.

ಈರುಳ್ಳಿಗೆ ಉತ್ತಮ ಬೆಲೆ ದೊರಕಿದ ಸಂದರ್ಭದಲ್ಲೇ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ರಾಯಚೂರು ತಾಲ್ಲೂಕಿನ ಹಲವೆಡೆ ಈರುಳ್ಳಿ ಬೆಳೆ ಹಾಳಾಗಿದೆ. ನೀರಿನಲ್ಲಿ ಕೊಳೆತು ಹೋಗುವುದನ್ನು ತಡೆಯಲು ಅಳಿದುಳಿದ ಈರುಳ್ಳಿ ತೆಗೆದು ಮಾರುಕಟ್ಟೆ ತಂದರೂ ಹಸಿ ಇರುವ ಕಾರಣ ಮಾರಾಟವಾಗುತ್ತಿಲ್ಲ. ಹಸಿಗೆ ಅದು ಕೊಳೆಯಲು ಆರಂಭಿಸಿದೆ.

ADVERTISEMENT

ತರಕಾರಿ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ₹20ರಿಂದ ₹40ರ ವರೆಗೆ ಇದೆ. ರಾಯಚೂರು ಎಪಿಎಂಸಿಯಲ್ಲಿ ಶುಕ್ರವಾರ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹1,810 ಹಾಗೂ ಗರಿಷ್ಠ ₹3,900ಕ್ಕೆ ಮಾರಾಟವಾಗಿದೆ. ಸಿಂಧನೂರಲ್ಲಿ ₹2,600ಗೆ ಮಾರಾಟವಾಗಿದೆ. ಹಸಿ ಇರುವ ಕಾರಣ ಕೆಲ ಪ್ರದೇಶಗಳಿಂದ ಬರುತ್ತಿರುವ ಈರುಳ್ಳಿ ಕೇಳುವವರಿಲ್ಲ. ಸರ್ಕಾರ ಈರುಳ್ಳಿ ಬೆಳೆಗಾರರ ನೆರವಿಗೆ ಬರಲಿದೆ ಎನ್ನುವ ಭರವಸೆಯಿಂದ ಎಪಿಎಂಸಿಗೆ ಬರುತ್ತಿರುವ ರೈತರಿಗೆ ಎಪಿಎಂಸಿ ಆದೇಶ ಆಘಾತ ಮೂಡಿಸಿದೆ.

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಈರುಳ್ಳಿ ಖರೀದಿದಾರರ ಸಂಖ್ಯೆ ಬಹಳ ಕಡಿಮೆ ಇದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯ ಹಾಗೂ ಇತರೆ ಭಾಗದಲ್ಲಿ ಈರುಳ್ಳಿ ಬೆಳೆದಿರುವ ರೈತರು ತಮ್ಮ ಉತ್ಪನ್ನ ತರುತ್ತಿದ್ದರೂ ಈರುಳ್ಳಿ ಖರೀದಿ ಕಷ್ಟವಾಗುತ್ತಿದೆ’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಆದಪ್ಪ ಗೌಡ ಹೇಳುತ್ತಾರೆ.

‘ಈರುಳ್ಳಿ ಬೆಳೆದಿರುವ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಕ್ಕ-ಪಕ್ಕದ ಅಥವಾ ತಮಗೆ ಅನುಕೂಲವಿರುವ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದಾಗಿದೆ. ಈರುಳ್ಳಿಯನ್ನು ಅಕ್ಟೋಬರ್ 26ರಿಂದ ಮಾರಾಟಕ್ಕೆ ಎಪಿಎಂಸಿಗೆ ತರಬಾರದು’ ಎಂದು ಮನವಿ ಮಾಡಿದ್ದಾರೆ.

ಪರಿಹಾರಕ್ಕೆ ಆಗ್ರಹ

‘ರಾಯಚೂರು ತಾಲ್ಲೂಕಿನ ಚಂದ್ರಬಂಡ ಭಾಗದಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಹಾಳಾಗಿದೆ. ಮಾರುಕಟ್ಟೆಯಲ್ಲೂ ಈರುಳ್ಳಿ ಮಾರುವ ಸ್ಥಿತಿಯಲ್ಲಿ ಇಲ್ಲ. ಸರ್ಕಾರ ರೈತರಿಗೆ ನಷ್ಟ ಪರಿಹಾರ ಕೊಡಬೇಕು’ ಎಂದು ರೈತ ಮಹಿಳೆ ಅಂಜನಮ್ಮ ಹಾಗೂ ರೈತ ಲಕ್ಷ್ಮಣ ಗೌಡ ಕಡಗಂದೊಡ್ಡಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.