ADVERTISEMENT

ಶುದ್ಧ ಕುಡಿಯುವ ನೀರಿಗಾಗಿ ಅಲೆದಾಟ

ಹಳದಿ ಬಣ್ಣದಿಂದ ಕೂಡಿದ ಕಲುಷಿತ ನೀರು ಸರಬರಾಜು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 6:43 IST
Last Updated 24 ಮಾರ್ಚ್ 2024, 6:43 IST
ಕೆರೆಯಿಂದ ಸರಬರಾಜು ಮಾಡಿದ ಹಳದಿ ಮಿಶ್ರಿತ ಕುಡಿಯುವ ನೀರು
ಕೆರೆಯಿಂದ ಸರಬರಾಜು ಮಾಡಿದ ಹಳದಿ ಮಿಶ್ರಿತ ಕುಡಿಯುವ ನೀರು   

ತುರ್ವಿಹಾಳ: ಶುದ್ಧ ಕುಡಿಯುವ ನೀರು ಪೂರೈಕೆಯಾಗದ ಕಾರಣ ಪಟ್ಟಣದ ಜನತೆ ಅಲೆದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ಕಳೆದ 7 ದಿನಗಳಿಂದ ಕಲುಷಿತವಾದ ಕೆರೆಯ ನೀರನ್ನು ಶುದ್ಧೀಕರಿಸದೇ ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ಈ ನೀರು ಹಳದಿ ಬಣ್ಣದಿಂದ ಕೂಡಿದ್ದು ಬಳಸಲು ಯೋಗ್ಯವಾಗಿಲ್ಲ. ಅನಿವಾರ್ಯ ಕಾರಣ ಜನರು ಕಲುಷಿತ ನೀರು ಬಳಸಿದ್ದಕ್ಕಾಗಿ ಹಲವರಿಗೆ ವಾಂತಿ ಭೇದಿ, ಡೆಂಗಿ ಜ್ವರ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಆತಂಕಗೊಂಡ ಜನ ದುಬಾರಿ ಹಣ ನೀಡಿ ಖಾಸಗಿ ಶುದ್ಧೀಕರಣ ಘಟಕಗಳ ಮುಂದೆ ಸರದಿ ನಿಂತು ನೀರು ತರುವ ಪರಸ್ಥಿತಿ ಎದುರಾಗಿದೆ.

ಪಟ್ಟಣದ ವ್ಯಾಪ್ತಿಗೆ ತುರ್ವಿಹಾಳ ಪಟ್ಟಣ ಹಾಗೂ 7 ಕ್ಯಾಂಪ್‌ಗಳು ಸೇರಿದಂತೆ ಒಟ್ಟು14 ವಾರ್ಡ್‌ಗಳಲ್ಲಿ 20 ಸಾವಿರ ಜನರು ವಾಸಿಸುತ್ತಿದ್ದಾರೆ. ಅಧಿಕಾರಿಗಳು ಶುದ್ ಧಕುಡಿಯುವ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಪಟ್ಟಣದಲ್ಲಿ ಸರ್ಕಾರದ ಎರಡು ಶುದ್ಧ ನೀರಿನ ಘಟಕಗಳಿವೆ. ಆ ಘಟಕಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪ್ರತಿದಿನ ಖಾಸಗಿ ಶುದ್ಧೀಕರಣ ಘಟಕಗಳಲ್ಲಿ ₹15 ನೀಡಿ 20 ಲೀಟರ್‌ ನೀರು ಪಡೆಯುವಂತಾಗಿದೆ. ಇತ್ತ ಕೂಲಿ ಕೆಲಸವಿಲ್ಲ. ಬರಗಾಲ ಬೇರೆ ಇದೆ. ಇಂಥ ಸಮಯದಲ್ಲಿ ನಿತ್ಯ ದುಬಾರಿ ಹಣ ತೆತ್ತು ನೀರು ಕುಡಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಜನ ಅಳಲು ತೋಡಿಕೊಂಡರು.

ಕುಡಿಯಲು ಶುದ್ಧ ನೀರು ಸರಬರಾಜು ಮಾಡುವಂತೆ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಶನಿವಾರ ಮುತ್ತಿಗೆ ಹಾಕಿದರು
ಕುಡಿಯಲು ಶುದ್ಧ ನೀರು ಸರಬರಾಜು ಮಾಡುವಂತೆ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಶನಿವಾರ ಮುತ್ತಿಗೆ ಹಾಕಿದರು
ಹಲವು ವರ್ಷಗಳಿಂದ ದುರಸ್ತಿಯಲ್ಲಿರುವ ನೀರು ಶುದ್ಧೀಕರಣ ಘಟಕ
ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಎರಡು ಶುದ್ಧ ನೀರಿನ ಘಟಕಗಳನ್ನು ಆರಂಭಿಸುವ ಮೂಲಕ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀರನ್ನು ಪೂರೈಸಲು ಅಧಿಕಾರಿಗಳು ಮುಂದಾಗಬೇಕು.
ಅನ್ವರ್ ಪಾಷಾ ದಳಪತಿ ಕಾರ್ಮಿಕ ಮುಖಂಡ ತುರ್ವಿಹಾಳ
ಕಲುಷಿತ ನೀರು ಕುಡಿದ ಕಾರಣ ಹಲವು ರೋಗಗಳು ಉಲ್ಬಣಗೊಂಡಿವೆ. ನೀರು ಪರೀಕ್ಷೆ ಮಾಡಿಸಿದ ನಂತರ ಕುಡಿಯಲು ಯೋಗ್ಯವಲ್ಲವೆಂದು ವರದಿ ಬಂದಿದೆ.
ಡಾ.ಮಂಜುನಾಥ ಅಣ್ಣೆಗೌಡ್ರು ವೈದ್ಯಾಧಿಕಾರಿ
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ಶುದ್ಧ ನೀರು ಪೂರೈಕೆ ಮಾಡಲಾಗುವುದು.
ಪ್ರಸನ್ನ ಎ.ಕಲ್ಯಾಣಶೆಟ್ಟಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ಅಧಿಕಾರಿಗಳಿಗೆ ತರಾಟೆ ಶನಿವಾರ ಪಟ್ಟಣ ಪಂಚಾಯಿತಿಗೆ ಮಹಿಳೆಯರು ಮುತ್ತಿಗೆ ಹಾಕಿ ಸರಬರಾಜು ಮಾಡುತ್ತಿರುವ ಕೆರೆಯ ನೀರನ್ನು ಜಾನುವಾರು ಸಹ ಕುಡಿಯುವುದಿಲ್ಲ. ನಮಗೆ ಸರಬರಾಜು ಮಾಡಿರುವ ನೀರನ್ನು ಕುಡಿದು ತೋರಿಸಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಹಿಂದೆ ಅಧಿಕಾರಿಗಳ ಸಭೆಯಲ್ಲಿ ವಾರ್ಡ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.