ರಾಯಚೂರು: ಶಾಂತಿ ಸೌಹಾರ್ದತೆಯ ಸಂದೇಶ ಸಾರುವ ರಂಜಾನ್ ಹಬ್ಬವನ್ನು ಕೋವಿಡ್ ಮಹಾಮಾರಿಯಿಂದಾಗಿ ಹಿಂದಿನ ಎರಡು ವರ್ಷಗಳಲ್ಲಿ ಸರಳವಾಗಿ ಆಚರಿಸಲಾಗಿತ್ತು. ಈ ಸಲ ಕೋವಿಡ್ ಪರಿಣಾಮವಿಲ್ಲ ಮುಸ್ಲಿಮರು ಒಟ್ಟಾಗಿ ಹಬ್ಬ ಆಚರಿಸುತ್ತಿರುವುದು ವಿಶೇಷ.
ಕೋವಿಡ್ ಅವಧಿಯಲ್ಲಿ ಸರಿಯಾದ ಕೆಲಸ ಸಿಗದೆ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳು ತೀವ್ರ ಹೊಡೆತ ಅನುಭವಿಸಿದ್ದವು. ಆರ್ಥಿಕ ಸಂಕಷ್ಟದಿಂದ ಈಗ ಚೇತರಿಕೆ ಕಾಣುತ್ತಿದೆ. ಆದರೆ ದರಗಳು ಏರಿಕೆ ಮಧ್ಯೆಯೇ ಈದ್–ಉಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ರಂಜಾನ್ನಲ್ಲಿ ಒಂದು ತಿಂಗಳ ಕಾಲ ಉಪವಾಸ ಮಾಡುವುದು, ರಾತ್ರಿಯ ವೇಳೆ ವಿಶೇಷ ನಮಾಜ್ (ತರಾಹ್ವಿ) ಮಾಡಲಾಗುತ್ತದೆ. ರಂಜಾನ್ ದಾನ– ಧರ್ಮ, ಹಸಿವಿನ ಮಹತ್ವವನ್ನು ತಿಳಿಸುವ ಮಾಸವಾಗಿದೆ. ಈ ತಿಂಗಳಲ್ಲಿ 7.5 ತೊಲೆ ಬಂಗಾರ, 52 ತೊಲೆ ಬೆಳ್ಳಿ ಅಥವಾ ಈ ಮೌಲ್ಯದ ಆಸ್ತಿ ಉಳ್ಳ ಮುಸ್ಲಿಮರು ತಮ್ಮ ಆಸ್ತಿಯ ಶೇ 2.5 ಭಾಗ ದಾನ ( ಝಕಾತ್) ಮಾಡುವುದು ಕಡ್ಡಾಯ. ಇದು ಮುಸ್ಲಿಮರಿಗೆ ಸ್ವಯಂ ತೆರಿಗೆ ವಿಧಿಸಿದಂತೆ. ಇದು ಬಡವರು, ಸಾಲಬಾಧೆ ಉಳ್ಳವರು ನಿರ್ಗತಿಕರಿಗೆ ಮಾತ್ರ ಇದರಿಂದ ವಿನಾಯಿತಿ ಇದೆ.
ಸದ್ಕೆ ಫಿತ್ರ್: ಆಸ್ತಿ ಉಳ್ಳ ಸದ್ಕೆ ಫಿತ್ರ್ ಅಂದರೆ ಮುಸ್ಲಿಮರು ತಮ್ಮ ಕುಟುಂಬ ಸದಸ್ಯರ ಲೆಕ್ಕದಲ್ಲಿ ತಲಾ ಎರಡು ಕೆ.ಜಿ.ಗೋಧಿ ಅಥವಾ ಅಕ್ಕಿ ಬಡವರಿಗೆ ದಾನ ಮಾಡಬೇಕು. ಇದು ಹಬ್ಬದ ಮೊದಲು ಅಂದರೆ ರಂಜಾನ್ ಹಬ್ಬದ ನಮಾಜ್ ಮಾಡುವ ಮೊದಲು ಕಡ್ಡಾಯವಾಗಿ ಮಾಡಬೇಕು.
ರಂಜಾನ್ ಮಾಸ ಕರುಣಿಸಿದ್ದಕ್ಕಾಗಿ ಈದ್ ನಮಾಜ್ ಮಾಡಲಾಗುತ್ತದೆ. ಇದು ಪ್ರತಿದಿನ 5 ಬಾರಿ ಮಾಡುವ ನಮಾಜ್ ನಂತೆ ಕಡ್ಡಾಯವಲ್ಲ. ಹೊಸ ಬಟ್ಟೆಯಲ್ಲೇ ಮಾಡಬೇಕಿರುವ ನಿಯಮವಿಲ್ಲ. ಶುಭ್ರವಾದ ಬಟ್ಟೆ ಧರಿಸಿಯೂ ನಮಾಜ್ ಮಾಡಬಹುದಾಗಿದೆ.
‘ಇಸ್ಲಾಂ ಧರ್ಮದಲ್ಲಿ, ಮನುಕುಲಕ್ಕೆ ಒಳ್ಳೆಯದು ಮಾಡಬೇಕು. ನಮ್ಮ ಆಚರಣೆ ಮತ್ತೊಬ್ಬರಿಗೆ ಸಮಸ್ಯೆಯಾಗಬಾರದು ಎಂದು ತಿಳಿಸುತ್ತದೆ. ಹೀಗಾಗಿ ಎರಡು ವರ್ಷ ಕೋವಿಡ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಸ್ವಯಂ ಜಾಗೃತಿಯಿಂದ ಈದ್ಗಾ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡದೇ ಮನೆಯಲ್ಲಿಯೇ ಕುಟುಂಬ ಸದಸ್ಯರೊಂದಿಗೆ ನಮಾಜ್ ಮಾಡಲಾಗಿತ್ತು. ಈ ಬಾರಿ ಕೋವಿಡ್ ಪರಿಣಾಮವಿಲ್ಲದ ಕಾರಣ ಸಾದ್ಯವಾದಷ್ಟು ಜಾಗೃತಿ ವಹಿಸಿ ಹಬ್ಬವನ್ನು ಆಚರಣೆ ಮಾಡಬೇಕು‘ ಎಂಬುದು ಧರ್ಮಗುರುಗಳ ಸಂದೇಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.