ಜಾಲಹಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣ ವಿವಿಧ ಭಾಗಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಇದರಿಂದ ಗ್ರಾಮದ ಜನರಲ್ಲಿ ವಾಂತಿ–ಭೇದಿ ಉಂಟಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಹಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಬಸಲಿಂಗಪ್ಪ ಬಾವಿ ಹಾಗೂ ಗಂಜಗುಂಡ ಬಾವಿಗೆ ಭೇಟಿ ನೀಡಿ ಕುಡಿಯುವ ನೀರನ್ನು ಪರಿಶೀಲಿಸಿದರು. ತಕ್ಷಣವೇ ಈ ಎರಡು ಭಾವಿಗಳಲ್ಲಿ ಇರುವ ಹೊಳು ಸ್ವಚ್ಛಚತೆ ಮಾಡುವಂತೆ ಸ್ಥಳದಲ್ಲಿಯೇ ಇದ್ದ ಗ್ರಾ.ಪಂ ಕಾರ್ಯದರ್ಶಿ ಗುಂಡೂರಾವ್ ಅವರಿಗೆ ತಾಕೀತು ಮಾಡಿದರು.
ನೀರು ಸರಬರಾಜು ಮಾಡುವ ಸಿಬ್ಬಂದಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಪೈಪ್ಗಳಲ್ಲಿ ನೀರು ಸೋರಿಕೆ ಕಂಡು ಬಂದರೆ ತಕ್ಷಣವೇ ಅಧಿಕಾರಿಗಳಿಗೆ ತಿಳಿಸಬೇಕು. ಕೆಲಸದಲ್ಲಿ ಶಿಸ್ತು ಕಾಪಾಡಬೇಕು. ಓಣಿಗಳಲ್ಲಿ ನೀರು ಬಿಟ್ಟ ತಕ್ಷಣವೇ ಸೋರಿಕೆ ಬಗ್ಗೆ ಗಮನ ಹರಿಸಬೇಕು. ಸಮಯ ಪಾಲನೆ ಮಾಡಬೇಕು ಎಂದು ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಜಾಲಹಳ್ಳಿ ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ ಜಲ ಜೀವನ ಮಿಷನ್ ಕಾಮಗಾರಿ ಪೂರ್ಣಗೊಂಡಿದೆ. ಆದರೆ 8 ಮತ್ತು 9 ನೇ ವಾರ್ಡ್ನಲ್ಲಿ ಮಾತ್ರ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಗ್ರಾಮ ಪಂಚಾಯಿತಿಗೆ ಸೇರಿದ ಹಳೆಯ ಪೈಪ್ಲೈನ್ ಇದ್ದು, ಸ್ವಲ್ಪ ಮಟ್ಟಿಗೆ ಸಮಸ್ಯೆ ಉಂಟಾಗಿದೆ. ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರು ಪೂರೈಕೆಯ ದೇವದುರ್ಗ ವಿಭಾಗದ ಸಹಾಯಕ ಎಂಜಿನಿಯರ್ಗೆ ಶೀಘ್ರವೇ ಎರಡು ವಾರ್ಡ್ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ತಿಮ್ಮಪ್ಪನಾಯಕ ದಿವಾನ್, ಮುಖಂಡರಾದ ಶಂಕರಗೌಡ ಪಾಟೀಲ್, ಮೌಲಾ ಸಾಬ್, ಗ್ರಾ.ಪಂ ಸಿಬ್ಬಂದಿಗಳಾದ ಯಂಕೋಬ ಪಲಕನಮರಡಿ, ಮುದ್ದರಂಗಪ್ಪ ನಾಯಕ, ವಿಠೋಬ ನಾಯಕ ಮಾಳಿ ಸೇರಿ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.