ಸಿಂಧನೂರು: ಲೋಕೋಪಯೋಗಿ ಇಲಾಖೆಯ ಅನುಮತಿ ಇಲ್ಲದೇ ನಗರಸಭೆಯಿಂದ ಕುಷ್ಟಗಿ ಮುಖ್ಯರಸ್ತೆಯಲ್ಲಿ ಬೃಹತ್ ಜಾಹೀರಾತು ಬೋರ್ಡ್ಗಳನ್ನು ಹಾಕಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಸುರೇಶ ಗೊಬ್ಬರಕಲ್ ಹಾಗೂ ನಗರ ಘಟಕದ ಅಧ್ಯಕ್ಷ ದಾವಲಸಾಬ ದೊಡ್ಡಮನಿ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸೋಮವಾರ ಹೇಳಿಕೆ ನೀಡಿರುವ ಅವರು, ನಗರದ ಗಾಂಧಿ ವೃತ್ತದಿಂದ ಕುಷ್ಟಗಿ ರಸ್ತೆಯ ಪೆಟ್ರೋಲ್ ಬಂಕ್ವರೆಗೆ ನಾಲ್ಕು ಜಾಹೀರಾತು ಬೋರ್ಡ್ಗಳನ್ನು ಹಾಕಲಾಗಿದೆ. ನಗರಸಭೆಯವರು ಖಾಸಗಿಯವರಿಗೆ ಈ ಬೋರ್ಡ್ಗಳನ್ನು ಬಾಡಿಗೆ ರೂಪದಲ್ಲಿ ಹಾಕಲು ಪರವಾನಿಗೆ ಕೊಟ್ಟಿದ್ದಾರೆ. ಈ ರಸ್ತೆಯು ರಾಜ್ಯ ಹೆದ್ದಾರಿಗೆ ಸಂಬಂಧಿಸಿದ್ದು, ಲೋಕೋಪಯೋಗಿ ಇಲಾಖೆಯ ಮಾಲೀಕತ್ವದಲ್ಲಿದೆ. ಆದರೆ, ನಗರಸಭೆಯವರು ಕಾನೂನೂ ಬಾಹಿರವಾಗಿ ಖಾಸಗಿಯವರಿಗೆ ಬಾಡಿಗೆ ಕೊಟ್ಟು ಹಣ ಪಡೆಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಗರಸಭೆ ವಿರುದ್ಧ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.