ಸಿಂಧನೂರು: ‘ತುರ್ವಿಹಾಳ ಹೋಬಳಿಯ ಚಿಕ್ಕಬೇರಿಗಿ ಸೀಮಾದ ಸರ್ವೆ ನಂ 10ರ ಪರಂಪೂಕ ಹಾಗೂ ಸರ್ವೆ ನಂ 96ರ ಖಾರಿಜಖಾತ ಜಮೀನಿಗೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ನಿರುಪಾದಿ ಗೋಮರ್ಸಿ ಅವರು ನೀಡಿರುವ ಹೇಳಿಕೆ ಹಾಗೂ ಸಲ್ಲಿಸಿರುವ ಮನವಿ ಪತ್ರ ಸತ್ಯಕ್ಕೆ ದೂರವಾದದ್ದು’ ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ ಬೇರಿಗಿ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಸರ್ವೆ ನಂ 96ರಲ್ಲಿ 28 ಎಕರೆ ಖಾರಿಜಖಾತ ಭೂಮಿ ಇದ್ದು, ಈ ಭೂಮಿಯಲ್ಲಿ ಶೇ 80ರಷ್ಟು ಉಳುಮೆಗೆ ಯೋಗ್ಯವಾಗಿಲ್ಲ. ಶೇ 20ರಷ್ಟು ಭೂಮಿಯ 1 ರಿಂದ 2 ಎಕರೆ ಜಮೀನಿನಲ್ಲಿ ಬಡ ದಲಿತ ಸಮುದಾಯದ ಭೂರಹಿತರು ಕಳೆದ 20-30 ವರ್ಷಗಳಿಂದ ಉಳುಮೆ ಮಾಡುತ್ತ, ಸಜ್ಜೆ, ಜೋಳ, ತೊಗರಿ ಬೆಳೆದುಕೊಂಡು ಉಪಜೀವನ ನಡೆಸುತ್ತ ಬಂದಿದ್ದಾರೆ’ ಎಂದರು.
ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಪಟ್ಟಭದ್ರಹಿತಾಸಕ್ತಿಗಳ ಮಾತುಗಳನ್ನು ಕೇಳಿ, ಬಡ ದಲಿತ ಭೂರಹಿತ ಕುಟುಂಬದವರನ್ನು ಪಟ್ಟಭದ್ರಹಿತಾಸಕ್ತಿಗಳು ಎಂದು ಕರೆದಿರುವುದು ಮತ್ತು ಅಧಿಕಾರಿಗಳು ಸಾಗುವಳಿದಾರರ ಜೊತೆಗೆ ಶಾಮೀಲಾಗಿದ್ದಾರೆಂದು ಹೇಳಿರುವುದು ಸರಿಯಲ್ಲ ಎಂದು ಹೇಳಿದರು.
20-30 ವರ್ಷಗಳಿಂದ ಜಮೀನು ಸಾಗುವಳಿ ಮಾಡಿದ ದಲಿತ ಕುಟುಂಬಗಳಿಗೆ ಪಟ್ಟಾ ನೀಡಬೇಕು. ಸಾಗುವಳಿ ಜಮೀನು ಹೊರತುಪಡಿಸಿ ಸರ್ವೆ ನಂ 10 ಹಾಗೂ ಸರ್ವೆ ನಂ 96ರ ವ್ಯಾಪ್ತಿಯ ಭೂಮಿಯನ್ನು ಸರ್ವೆ ಮಾಡಿಸಿ ತಂತಿಬೇಲಿ ಹಾಕಿ ರಕ್ಷಣೆ ಮಾಡಬೇಕು. ತಪ್ಪು ಅಂಶ ಇರುವ ಮನವಿ ಪತ್ರವನ್ನು ಸರ್ಕಾರ ಮಾನ್ಯ ಮಾಡಬಾರದು. ಸಾಗುವಳಿ ಮಾಡುವ ಎಲ್ಲಾ ಭೂಹೀನರಿಗೆ ಪಟ್ಟಾ ಕೊಡಲೇಬೇಕು. ಭೂಮಿ ಸಾಗುವಳಿ ಮಾಡುವ ಸಾಗುವಳಿದಾರರ ಮೇಲೆ ಅಧಿಕಾರಿಗಳು ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕೆಆರ್ಎಸ್ ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ರೈತ ಮುಖಂಡರಾದ ಬಿ.ಎನ್.ಯರದಿಹಾಳ, ಗುಡದೇಶ ಬೇರಿಗಿ, ಯಲ್ಲಪ್ಪ ಭಜಂತ್ರಿ ಚಿಕ್ಕಬೇರಿಗಿ, ಮಹಿಳಾ ಘಟಕದ ಅಧ್ಯಕ್ಷ ರೇಣುಕಮ್ಮ ಬೂದಿವಾಳ ಕ್ಯಾಂಪ್, ಬಸವರಾಜ ಚಿಕ್ಕಬೇರಿಗಿ, ಪಾಮಣ್ಣ ಚಿಕ್ಕಬೇರಿಗಿ, ಸಂಜೀವಪ್ಪ ಚಿಕ್ಕಬೇರಿಗಿ ಹಾಗೂ ಹನುಮಂತ ಪೂಜಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.