ಲಿಂಗಸುಗೂರು: ಜಲ ಜೀವನ್ ಮಿಷಿನ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದ ತಾಲ್ಲೂಕಿನ ಹುನಕುಂಟಿ ಕೆರೆ ಆಧುನೀಕರಣ ಕಾಮಗಾರಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಕೆರೆ ನೀರು ಎತ್ತುವುದು ಮತ್ತು ಮುಳ್ಳುಕಂಟಿ ಸ್ವಚ್ಛತೆ ಕಾರ್ಯ ಆರಂಭಗೊಂಡಿದೆ.
ಕೆರೆ ಆಧುನೀಕರಣ ಕಾಮಗಾರಿ ನನೆಗುದಿಗೆ ಹಾಗೂ ಗ್ರಾಮಸ್ಥರಿಗೆ ಉಂಟಾಗಿರುವ ನೀರಿನ ಸಮಸ್ಯೆ ಕುರಿತು ‘ಪ್ರಜಾವಾಣಿ’ ಯಲ್ಲಿ ಸರಣಿ ವರದಿ ಪ್ರಕಟಗೊಂಡಿತ್ತು. ಎಚ್ಚೆತ್ತ ಆಡಳಿತ ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ನೀಡಿ ಕೆರೆ ಆಧುನೀಕರಣ ಕಾಮಗಾರಿಗೆ ಮುಂದಾಗಿದ್ದು, ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆರೆ ಆಧುನೀಕರಣಗೊಳಿಸಿ, ಗ್ರಾಮಗಳಲ್ಲಿ ಪೈಪಲೈನ್ ಮಾಡಿ, ಮನೆ ಮನೆಗಳಿಗೆ ನಳ ಜೋಡಣೆ ಮಾಡುವ ಕಾಮಗಾರಿಗೆ ಮೂರು ವರ್ಷದ ಹಿಂದೆಯೆ ₹ 2ಕೋಟಿಗೆ ಟೆಂಡರ್ ನೀಡಲಾಗಿತ್ತು. ಕೆರೆ ಸ್ವಚ್ಛಗೊಳಿಸದೆ ಪೈಪ್ಲೈನ್ ಮಾಡದಂತೆ ಗ್ರಾಮಸ್ಥರು ವಿರೋಧ ಮಾಡಿದ್ದರಿಂದ ಗುತ್ತಿಗೆದಾರರು ಯಾವುದೇ ಕೆಲಸ ಮಾಡಿರಲಿಲ್ಲ.
‘ಮೂರು ವರ್ಷಗಳಿಂದ ಕೆರೆ ಆಧುನೀಕರಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಸ್ಥಳೀಯ ಸಂಸ್ಥೆಯ ಸದಸ್ಯರು, ಮುಖಂಡರು ಸಾಕಷ್ಟು ಪ್ರಯತ್ನ ನಡೆಸಿದ್ದರು ಕೂಡ ಗುತ್ತಿಗೆದಾರ ಪೈಪ್ಲೈನ್ ಹೆಸರಲ್ಲಿ ಹಣ ಪಾವತಿಸಿಕೊಂಡು ಕೆರೆ ಅಭಿವೃದ್ಧಿ ಕಾಮಗಾರಿಗೆ ಗುಡ್ ಬೈ ಹೇಳಿದ್ದರು. ‘ಪ್ರಜಾವಾಣಿ’ಯ ಸರಣಿ ವರದಿಗಳಿಂದ ಕಾಮಗಾರಿ ಆರಂಭಗೊಂಡಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶರಣಗೌಡ ಮಾಲಿ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.