ದೇವದುರ್ಗ (ರಾಯಚೂರು ಜಿಲ್ಲೆ): ತಾಲ್ಲೂಕಿನ ಡಿ.ಕರಡಿಗುಡ್ಡ ಗ್ರಾಮದ ಹೊರವಲಯದಲ್ಲಿ ಮೂವರ ಮೇಲೆ ಚಿರತೆ ದಾಳಿ ಮಾಡಿದೆ. ಒಬ್ಬರು ಗಂಭೀರ ಗಾಯಗೊಂಡಿದ್ದು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಗ್ರಾಮದ 16 ವರ್ಷದ ಬಾಲಕನೊಬ್ಬ ಬೆಳಿಗ್ಗೆ 8 ಗಂಟೆಗೆ ಬಯಲು ಶೌಚಕ್ಕೆ ಹೊರಟಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಬಾಲಕ ಮರಳಿ ಮನೆಗೆ ಬಂದು ಗ್ರಾಮಸ್ಥರಿಗೆ ಚಿರತೆ ಕಾಣಿಸಿದ್ದನ್ನು ತಿಳಿಸಿದ್ದಾನೆ.
ಮಕ್ಕಳ ಮೇಲೆ ದಾಳಿ ಮಾಡಿದರೆ ಕಷ್ಟ ಎಂದು ಆತಂಕಗೊಂಡ ಗ್ರಾಮಸ್ಥರು ಗುಂಪು ಕಟ್ಟಿಕೊಂಡು ಶಿಳ್ಳೆ ಕೇಕೆ ಹಾಕುತ್ತ ಪೊದೆಗಳತ್ತ ಸಾಗಿದ್ದಾರೆ. ಇದೇ ಅವಧಿಯಲ್ಲಿ ಹಠಾತ್ ಎರಗಿದ ಚಿರತೆ ಗ್ರಾಮದ ರಮೇಶ (35) ಮೇಲೆ ದಾಳಿ ಮಾಡಿ ಬಲಗೈ ಕಚ್ಚಿ ಗಾಯಗೊಳಿಸಿದೆ. ಬಿಡಿಸಲು ಹೋದ ಮಲ್ಲಣ್ಣ (42), ರಂಗನಾಥ (29) ಅವರ ಮೇಲೆಯೂ ದಾಳಿ ಮಾಡಿದೆ. ಮೂವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇ 18 ರಂದು ವಾಚನಾಯಕ ತಾಂಡದಲ್ಲಿ ಆಕಳು ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾಲಹಳ್ಳಿ, ಬಿ. ಗಣೇಕಲ್, ಎನ್ ಗಣೇಕಲ್, ಆಲ್ಕೋಡ ಮತ್ತು ಅರಕೇರಾದ ಚಿರತೆ ಕಾಣಿಸಿಕೊಂಡಿದೆ. ಎರಡು ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಚಿರತೆ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಮೇಲೆ ದಾಳಿ ಇಡುತ್ತಿರುವ ಚಿರತೆಯನ್ನು ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.