ಸಿಂಧನೂರು: ಸ್ವಂತ ಮಗನನ್ನೇ ಕೊಲೆ ಮಾಡಿದ ತಂದೆಗೆ ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ತೀರ್ಪು ನೀಡಿದ್ದಾರೆ.
ಯಲ್ಲಪ್ಪ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ಆಕೆಯ ತವರೂರಾದ ಎಲೆಕೂಡ್ಲಿಗಿ ಗ್ರಾಮಕ್ಕೆ 2021ರ ಫೆಬ್ರುವರಿ 1ರಂದು ಹೋದಾಗ ನಿರಾಕರಿಸಿದ್ದಾಳೆ. 4 ವರ್ಷದ ಪುತ್ರ ಮಹೇಶನನ್ನು ಅಪಹರಿಸಿಕೊಂಡು ಹೋಗಿ, 2ನೇ ಆರೋಪಿತಳ ಪ್ರಚೋದನೆಯಿಂದ ಅಂದು ಸಂಜೆ 5.30 ಗಂಟೆಗೆ ಪುಟ್ಕಿನಾಳ ಗ್ರಾಮದ ಸವಳು ಹಳ್ಳದ ಹತ್ತಿರ ಪುತ್ರನ ಕತ್ತು ಹಿಸುಕಿ ಕೊಲೆ ಮಾಡಿದ್ದರಿಂದ ಯಲ್ಲಪ್ಪನ ವಿರುದ್ಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ಮಂಗಳವಾರ 1ನೇ ಆರೋಪಿ ಯಲ್ಲಪ್ಪ ಅಪರಾಧ ಎಸಗಿದ್ದಾರೆಂದು ಪರಿಗಣಿಸಿ ಆತನಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2ನೇ ಆರೋಪಿತಳ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ಎ. ಗಡಕರಿ ವಾದ ಮಂಡಿಸಿದ್ದಾರೆ. ಪಿಸಿ ಪಂಪಾಪತಿ ಅವರು ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.