ಸಿರವಾರ: ಮಾಜಿ ಸಂಸದ ಬಿ.ವಿ.ನಾಯಕಗೆ ರಾಯಚೂರು ಲೋಕಸಭಾ ಬಿಜೆಪಿ ಟಿಕೆಟ್ ನೀಡಬೇಕು ಎಂದು ಸಿರವಾರ ಮಂಡಲ ಬಿಜೆಪಿ ಕಾರ್ಯದರ್ಶಿ ದೇವರಾಜ ಸ್ವಾಮಿ ಹಿರೇಮಠ ಒತ್ತಾಯಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಘೋಷಣೆ ಮಾಡಿದ್ದು, ಅದನ್ನು ಮರು ಪರಿಶೀಲನೆ ಮಾಡಬೇಕು. ಸಂಸದರು 5 ವರ್ಷದಲ್ಲಿ ಒಮ್ಮೆಯೂ ಕ್ಷೇತ್ರದ ಕಡೆ ಮುಖ ಮಾಡಿಲ್ಲ. ಅಭಿವೃದ್ಧಿ ಕೆಲಸಗಳ ಆಗಿಲ್ಲ. ಸ್ಥಳೀಯವಾಗಿ ನಡೆದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಮತದಾರರಿಗೆ ಮುಖವೂ ತೋರಿಸದೇ ನಮ್ಮ ಸಮಸ್ಯೆಗಳು ಸ್ಪಂದಿಸದೇ ಕಾಣದಂತಾಗಿದ್ದರು. ಈಗ ಏಕಾಏಕಿ ಮತ್ತೆ ಹಾಲಿ ಸಂಸದರಿಗೆ ಟಿಕೆಟ್ ನೀಡಿದ್ದು, ನಮಗೆ ಮತ ಕೇಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬಿ.ವಿ.ನಾಯಕ ಅವರು 2014ರಲ್ಲಿ ಮೋದಿ ಅಲೆ ಇದ್ದರೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಜಯ ಗಳಿಸಿದ್ದರು. ಇನ್ನೂ ಬಿ.ವಿ ನಾಯಕ ಅವರು ಸ್ಥಳೀಯರಿಗೆ ಸುಲಭವಾಗಿ ಸಿಗುವ ವ್ಯಕ್ತಿಯಾಗಿದ್ದು, ಬಿಜೆಪಿ ಟಿಕೆಟ್ ನೀಡಿದರೆ ಅತಿಹೆಚ್ಚು ಮತಗಳಿಂದ ಗೆಲುವು ಸಾಧಿಸಲಾಗುವುದು ಎಂದು ಹೇಳಿದರು.
ಕೂಡಲೇ ಹೈಕಮಾಂಡ್ ಇದರ ಬಗ್ಗೆ ಪುನರ್ ಪರಿಶೀಲನೆ ನಡೆದ ಬಿ.ವಿ.ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಮರೇಶ ಗಡ್ಲ, ಕೃಷ್ಣ ನಾಯಕ, ಮುಖಂಡರಾದ ಉಮಾಶಂಕರ ಜೇಗರಕಲ್, ಚನ್ನೂರು ಚನ್ನಪ್ಪ, ವಿಜಯಕುಮಾರ ಗುಡ್ಡದಮನೆ, ಗುರುಗೌಡ, ಎಂ.ನಾಗಪ್ಪ, ಬೈನೇರ್ ರಾಮಯ್ಯ, ಶ್ರೀಕಾಂತ ಮ್ಯಾದಾರ್, ಚನ್ನು ಹೊಸಮಠ, ತಾಯಣ್ಣ ನೀಲಗಲ್, ವಾಯಿದ್, ಕುಪ್ಪಾಚಾರ್ ಜೋಶಿ, ವಿನಯಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.