ADVERTISEMENT

ಲೋಕಸಭಾ ಚುನಾವಣೆ ಫಲಿತಾಂಶ: ಹಿಂದೆ ಜಿಲ್ಲಾಧಿಕಾರಿ, ಈಗ ಸಂಸತ್‌ ಸದಸ್ಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 16:01 IST
Last Updated 4 ಜೂನ್ 2024, 16:01 IST
ಜಿ.ಕುಮಾರ ನಾಯಕ
ಜಿ.ಕುಮಾರ ನಾಯಕ   

ರಾಯಚೂರು: ನಿವೃತ್ತ ಐಎಎಸ್‌ ಅಧಿಕಾರಿ, ಬೆಂಗಳೂರು ಮೂಲದ ಜಿ.ಕುಮಾರ ನಾಯಕ 2023ರ ಸೆಪ್ಟೆಂಬರ್ 31ರಂದು ಸೇವಾ ನಿವೃತ್ತಿ ಹೊಂದಿ ಏಳು ತಿಂಗಳಲ್ಲೇ ಕಾಂಗ್ರೆಸ್‌ ಸೇರಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸಿದ್ದು, ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸಲಿದ್ದಾರೆ.

ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಿಂದ ಬಿಇ ಪದವಿ ಪಡೆದಿದ್ದಾರೆ. ಐಎಎಸ್‌ 1990ರ ಕೇಡರ್‌ನ ಇವರು ಹುಣಸೂರು–ಕುಮಟಾ ಉಪ ವಿಭಾಗಾಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ನಂತರ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ, 1996–1999ರವರೆಗೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದರು. 1999–2002ರವರೆಗೆ ರಾಯಚೂರು ಜಿಲ್ಲಾಧಿಕಾರಿ, 2003–2005ರವರೆಗೆ ಮೈಸೂರು ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಆಯುಕ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಐಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಎಲ್ಲ ರಾಜಕಾರಣಿಗಳ ಪರಿಚಯ ಅವರಿಗೆ ಇತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಒಡನಾಟ ಇದ್ದ ಕಾರಣಕ್ಕೆ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರಕಿತ್ತು.

ADVERTISEMENT

ನಗರದಲ್ಲಿ ಓಪೆಕ್‌ ಆಸ್ಪತ್ರೆ ಆರಂಭವಾಗಿದೆ. ಮಾವಿನಕೆರೆ ಉದ್ಯಾನ, ಬಹುಮಹಡಿ ಗ್ರಂಥಾಲಯ ಕಟ್ಟಡ ಜಿ.ಕುಮಾರ ನಾಯಕ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲೇ ನಿರ್ಮಾಣಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.