ADVERTISEMENT

‘ಸರ್ಕಾರದ ಆಡಳಿತ ವೈಫಲ್ಯ: ಜನತೆಗೆ ಸಂಕಷ್ಟ’

ಮಾನ್ವಿ: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:38 IST
Last Updated 19 ಜೂನ್ 2024, 15:38 IST
ಮಾನ್ವಿಯಲ್ಲಿ ಬುಧವಾರ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದರು
ಮಾನ್ವಿಯಲ್ಲಿ ಬುಧವಾರ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದರು   

ಮಾನ್ವಿ: ‘ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ವಾಗ್ದಾಳಿ ನಡೆಸಿದರು.

ಬುಧವಾರ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದಿಂದ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಗ್ಯಾರಂಟಿಗಳ ನಿರ್ವಹಣೆಗೆ ಅನುದಾನ ಸರಿದೂಗಿಸಲು ತೈಲ ದರ ಹೆಚ್ಚಳದಂತಹ ಜನವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಕಳೆದ ವರ್ಷ ಬರಗಾಲ, ಬೆಳೆಹಾನಿಯಿಂದ ನಷ್ಟ ಅನುಭವಿಸಿದ್ದ ರೈತರಿಗೆ ತೈಲ ದರ ಹೆಚ್ಚಳ, ಬರ ಪರಿಹಾರ ಅನುದಾನದ ಅಸಮರ್ಪಕ ಹಂಚಿಕೆಯಿಂದ ತೊಂದರೆ ಅನುಭವಿಸುವಂತಾಗಿದೆ. ಒಂದು ವರ್ಷದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ’ ಎಂದು ಅವರು ದೂರಿದರು.

ADVERTISEMENT

ಪಟ್ಟಣದ ಬಸವ ವೃತ್ತದಲ್ಲಿ ಧರಣಿ ನಡೆಸಿದ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ರಾಜು ಪಿರಂಗಿ ಅವರಿಗೆ ಮನವಿ ಸಲ್ಲಿಸಿದರು.

ದ್ವಿಚಕ್ರ ವಾಹನವನ್ನು ಎತ್ತಿನ ಬಂಡಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. ಟಂಟಂ ಆಟೊ ವಾಹನವನ್ನು ತಹಶೀಲ್ದಾರ್ ಕಚೇರಿವರೆಗೆ ಹಗ್ಗದಿಂದ ಎಳೆದೊಯ್ಯುವ ಮೂಲಕ ಪ್ರತಿಭಟಿಸಲಾಯಿತು.

ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ರಾಜಾ ಮಹೇಂದ್ರ ನಾಯಕ, ಜೆ.ಎಚ್.ದೇವರಾಜ, ರಾಜಾ ರಾಮಚಂದ್ರ ನಾಯಕ, ಖಲೀಲ್ ಖುರೇಷಿ, ಶ್ರೀಧರ ಸ್ವಾಮಿ, ಪಿ.ರವಿಕುಮಾರ, ಎಸ್.ವೆಂಕೋಬ, ಮೌನೇಶ ಹರೇಟನೂರು, ರಾಜಾ ಆದರ್ಶ ನಾಯಕ, ನಾರಾಯಣರಾವ್ ದೇಸಾಯಿ, ಮಲ್ಲಪ್ಪ ಹೂಗಾರ, ಶಿವರಾಜ ನಾಯಕ ಮಾನ್ವಿ, ಶರಣಪ್ಪಗೌಡ ಮದ್ಲಾಪುರ, ಸುಬಾನ್ ಬೇಗ್, ಲಕ್ಷ್ಮಣ ಯಾದವ್, ಮೌನೇಶ ನಾಯಕ, ವಿಜಯಲಕ್ಷ್ಮಿ ಸಿರವಾರ, ಅನಿಲ್ ಭಂಡಾರಿ, ರವಿಗೌಡ ಬ್ಯಾಗವಾಟ, ಶಿವರಾಜ ನಾಯಕ ಚಾಗಬಾವಿ, ಶರಣಬಸವಗೌಡ ಗವಿಗಟ್, ವಿಜಯ ನಾಯಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.