ಮಸ್ಕಿ: ನೀರಾವರಿ ನಿಗಮಕ್ಕೆ ಸೇರಿದ್ದು ಎನ್ನಲಾದ ಕವಿತಾಳ ರಸ್ತೆ ಪಕ್ಕದಲ್ಲಿನ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ಬಡಾವಣೆ ನಿರ್ಮಾಣ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.
ಈಚೆಗೆ ನೀರಾವರಿ ನಿಗಮದ ಅಧಿಕಾರಿಗಳು ತಮ್ಮ ಒಡೆತನದ ಜಮೀನಿನ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ನಿವೇಶನ ನಿರ್ಮಿಸಿರುವ ಪ್ರಕರಣ ಬಯಲಿಗೆ ಬಂದಿದೆ.
ನಿಗಮಕ್ಕೆ ಸೇರಿದ ಸರ್ವೇ ನಂ. 11ರಲ್ಲಿ ಕೆಲವು ಹಿಸ್ಸಾಗಳು ನೀರಾವರಿ ನಿಗಮಕ್ಕೆ ಸೇರಿದ್ದು ಅವುಗಳ ದಾಖಲೆ ತಿದ್ದಿ ಬಡವಾಣೆ ಮಾಡಿ ಮಾರಾಟ ಮಾಡಲಾಗುತ್ತಿರುವುದು ಕಂಡುಬಂದಿದೆ. ನಿಗಮದ ಅಧಿಕಾರಿಗಳು ತಹಶೀಲ್ದಾರ್ ಅವರಿಗೆ ಪತ್ರ ಬರೆದು ನಿಗಮಕ್ಕೆ ಸೇರಿದ ಜಮೀನನ್ನು ಸರ್ವೇ ಮಾಡಿಸಿ ಹದ್ದು ಬಸ್ತ್ ಮಾಡಿಸುವಂತೆ ಮನವಿ ಮಾಡಿದ್ದಾರೆ.
ಭೂಮಿಗೆ ಚಿನ್ನದ ಬೆಲೆ: ಮಸ್ಕಿ ತಾಲ್ಲೂಕು ಕೇಂದ್ರವಾದ ನಂತರ ಇಲ್ಲಿಯ ಜಮೀನಿಗೆ ಚಿನ್ನದ ಬೆಲೆ ಬಂದಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಜಮೀನಿನ ಬೆಲೆ ಗಗನಕ್ಕೇರಿದೆ. ನೀರಾವರಿ ನಿಗಮಕ್ಕೆ ಸೇರಿದ ಬೆಲೆ ಬಾಳುವ ಜಮೀನನ್ನೂ ಬಿಡದೆ ಬಡಾವಣೆಯನ್ನಾಗಿ ಮಾಡಿ ನಿವೇಶನ ಮಾರಾಟ ಮಾಡುತ್ತಿರುವುದು ನೀರಾವರಿ ನಿಗಮದ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಸಿದೆ.
ತಮ್ಮ ಇಲಾಖೆಯ ಜಮೀನನ್ನು ಸರ್ವೇ ಮಾಡಿ ಹದ್ದುಬಸ್ತ್ ಮಾಡಿಕೊಡುವಂತೆ ನೀರಾವರಿ ನಿಗಮದ ಮಸ್ಕಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಪತ್ರ ಬರೆದು ಮನವಿ ಮಾಡಿದರೂ ಇದುವರೆಗೂ ಸರ್ವೇ ಮಾಡದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನಿಗಮದ ಜಾಗ ಒತ್ತುವರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಾಖಲೆಗಳನ್ನು ತಿದ್ದಿ ಬೆಲೆ ಬಾಳುವ ಜಮೀನು ಕಬಳಿಸುವ ಹುನ್ನಾರ ನಡೆದಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.