ಕವಿತಾಳ: ‘ಕೆಲವು ಮಕ್ಕಳು ಗಣಿತ ವಿಷಯದ ಬಗ್ಗೆ ಅನಗತ್ಯ ಆತಂಕ ಪಡುತ್ತಾರೆ. ಸರಳ ರೀತಿಯಲ್ಲಿ ಅರ್ಥೈಸಿಕೊಂಡರೆ ಗಣಿತ ಕಲಿಕೆ ಸುಲಭವಾಗಲಿದೆ’ ಎಂದು ಮುಖ್ಯಶಿಕ್ಷಕ ಆಂಜನೇಯ ಹೇಳಿದರು.
ಸಿರವಾರ ತಾಲ್ಲೂಕಿನ ಹಿರೇಹಣಿಗಿ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನದಲ್ಲಿ ಅವರು ಮಾತನಾಡಿದರು.
‘ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಗಣಿತ ಕಲಿಕಾ ಆಂದೋಲನ ನಡೆಸಲಾಗುತ್ತಿದೆ. ತರಗತಿಗಳಲ್ಲಿ ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ಬೋಧಿಸುವ ಕುರಿತು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆಂದೋಲನದಿಂದ ಮಕ್ಕಳಿಗೆ ಪ್ರಯೋಜನವಾಗಲಿದೆ’ ಎಂದರು.
ಪಂಚಾಯಿತಿ ವ್ಯಾಪ್ತಿಯ 8 ಶಾಲೆಗಳ 4, 5 ಮತ್ತು 6ನೇ ತರಗತಿಯ ಅಂದಾಜು 120 ಮಕ್ಕಳು ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಗಣಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ₹1 ಸಾವಿರ (ಪ್ರಥಮ), ₹600 (ದ್ವಿತೀಯ) ಮತ್ತು ₹400 (ತೃತೀಯ) ನಗದು ಬಹುಮಾನ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಮೆಹಬೂಬಸಾಬ್, ಕಾರ್ಯದರ್ಶಿ ಬಿ.ನಿತ್ಯಾನಂದ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಸ್ವಾಮಿ, ಮುಖಂಡರಾದ ಆಂಜನೇಯ, ರಾಜಮಹ್ಮದ್, ಶಿಕ್ಷಕರಾದ ಅನಂತರಾಜ, ಮಹಾಂತೇಶ, ಸವಿತಾ, ನಾಗರಾಜ, ಸುಧಾಕರ, ಪ್ರಭಾವತಿ, ಅನುಸೂಯಾ, ಶ್ರೀದೇವಿ, ನರಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.