ರಾಯಚೂರು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಜಿಂದಾಲ್ ಕಂಪನಿ ಬಳಿಕ ದೇವದಾರಿ ಅರಣ್ಯ ಪ್ರದೇಶವನ್ನು ಕುದುರೆಮುಖ ಕಬ್ಬಣದ ಅದಿರು ಕಂಪನಿ (ಕೆಐಒಸಿಎಲ್) ಗಣಿಗಾರಿಕೆ ಗುತ್ತಿಗೆ ನೀಡಿದ್ದನ್ನು ವಿರೋಧಿಸಿ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ರಕ್ತದಿಂದ ಪತ್ರ ಬರೆದಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ರವಿಗೌಡ ಮಲ್ಲದಗುಡ್ಡ ತಿಳಿಸಿದರು.
ದೇವದಾರಿ ಅರಣ್ಯ ಪ್ರದೇಶ ಹಸಿರಿನಿಂದ ಕೂಡಿದ 401 ಹೆಕ್ಟರ್ ಪ್ರದೇಶವನ್ನು ಗಣಿಗಾರಿಕೆಗೆ ಗುತ್ತಿಗೆ ನೀಡಿದ್ದು ಖಂಡನೀಯ. ಈ ಪ್ರದೇಶವನ್ನು ‘ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್’ ಎಂದು ಗುರುತಿಸಲಾಗಿದೆ. ಇಲ್ಲಿ ಗಣಿಗಾರಿಕೆ ಶುರು ಮಾಡಿದರೆ ಸುಮಾರು 99,330 ಮರಗಳು ನಾಶವಾಗಲಿದೆ. ಅಪರೂಪದ ವನ್ಯ ಜೀವಿಗಳು, ಸಸ್ಯ ಸಂಪತ್ತಿಗೆ ಹಾನಿಯಾಗಲಿದೆ ಎಂದು ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡದೇ ಕುಮಾರಸ್ವಾಮಿ ತಮ್ಮ ನಿಲುವು ಬದಲಿಸಬೇಕು. ಈ ಹಿಂದೆ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಕೈಗೊಂಡಾಗ ಕೇಂದ್ರದ ಉನ್ನತ ಅಧಿಕಾರ ಸಮಿತಿ (ಸಿಇಸಿ) ಮಾರ್ಗದರ್ಶಿ ಸೂತ್ರ ಪಾಲಿಸಿಲ್ಲ ಎಂದು ಟೀಕೆಗೆ ಗುರಿಯಾಗಿತ್ತು. ಒಂದೆಡೆ ಕೆಎಂಆರ್ ಸಿಇ ಯಿಂದ ಸಿ ಕೆಟಗರಿ ಗಣಿ ಪ್ರದೇಶದಲ್ಲಿ ಅರಣ್ಯ ಬೆಳೆಸಲು ₹130 ಕೋಟಿ ಅನುದಾನ ನೀಡುವುದು ಮತ್ತೊಂದೆಡೆ ಶತಮಾನಗಳಿಂದ ಬೆಳೆದು ಬಂದ ನೈಸರ್ಗಿಕವಾದ ದಟ್ಟ ಕಾಡನ್ನು ಗಣಿಗಾರಿಕೆಗೆ ಹಸ್ತಾತರಿಸಿ ಹಾಳು ಮಾಡಲು ಮುಂದಾಗಿದೆ. ಸಚಿವರ ಈ ದ್ವಂಧ್ವ ನೀತಿ ಖಂಡನಾರ್ಹ ಎಂದರು.
ಸಮಾಜ ಪರಿವರ್ತನಾ ಸಮಿತಿಯ ಎಸ್ ಆರ್ ಹಿರೇಮಠ ಅವರು ಈಗಾಗಲೇ ರಾಜ್ಯ ಸಚಿವ ಈಶ್ವರ ಖಂಡ್ರೆಗೆ ಮನವಿ ಸಲ್ಲಿಸಿದ್ದು, ಪ್ರಗತಿಪರ ಚಿಂತಕರು, ಹೋರಾಟಗಾರರು ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ವಿರೂಪಾಕ್ಷಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.