ರಾಯಚೂರು: ‘ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಮುಂದಿನ ವರ್ಷ ಒಂದು ವಾರ ಆಯೋಜಿಸಬೇಕು’ ಎಂದು ಶಾಸಕ ಶಿವರಾಜ ಪಾಟೀಲ ಮನವಿ ಮಾಡಿದರು.
ನಗರದ ವೀರ ಆಂಜನೇಯ ಕಲ್ಯಾಣ ಮಂಟಪದಲ್ಲಿ ಮುಂಗಾರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಾಜಿ ಶಾಸಕ ಎ.ಪಾಪಾರೆಡ್ಡಿ ಮತ್ತು ಮುನ್ನೂರು ಕಾಪು ಹಿರಿಯ ಮುಖಂಡ ಬೆಲ್ಲಂ ನರಸಾರೆಡ್ಡಿ ನಾಯಕತ್ವದಲ್ಲಿ ದಕ್ಷಿಣ ಭಾರತದಲ್ಲೇ ಮಾದರಿಯಾದಂತಹ ಕಾರ್ಯಕ್ರಮ ನಡೆಯಬೇಕು’ ಎಂದು ಹೇಳಿದರು.
‘ರಾಯಚೂರು ಜಿಲ್ಲೆಯ ಇತಿಹಾಸದಲ್ಲಿ ಮುಂಗಾರು ಹಬ್ಬವನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜಿಲ್ಲೆಯ ಯಾವುದೇ ಸಮುದಾಯ ಆಚರಿಸಿಲ್ಲ. ಮುನ್ನೂರು ಕಾಪು ಸಮಾಜ ಒಗ್ಗಟ್ಟು ಪ್ರದರ್ಶನದ ಮೂಲಕ ಮುಂಗಾರು ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುತ್ತಿದೆ’ ಎಂದರು.
‘ಪಾಪಾರೆಡ್ಡಿ ಅವರ ಸಂಪರ್ಕದಲ್ಲಿ ಒಂದು ಲಕ್ಷ ಜನ ಇದ್ದಾರೆ ಎಂಬುದು ಮಾಹಿತಿ ಇದೆ. ಮುಂಗಾರು ಹಬ್ಬದ ಮೂಲಕ ರಾಯಚೂರು ಜಿಲ್ಲೆಯನ್ನು ಗುರುತಿಸಿದ ಕೀರ್ತಿ ಎ.ಪಾಪಾರೆಡ್ಡಿ ಅವರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.
ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎ.ಪಾಪಾರೆಡ್ಡಿ, ಸಮಾಜದ ಹಿರಿಯ ಮುಖಂಡ ಬೆಲ್ಲಂ ನರಸರೆಡ್ಡಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.