ADVERTISEMENT

ಮಸ್ಕಿ: ಸರ್ವಿಸ್ ರಸ್ತೆ ಕಾಮಗಾರಿಗೆ ಅಡ್ಡಿ

ಒತ್ತುವರಿ ತರವು ವಿಳಂಬ: ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಮೇ 2024, 4:59 IST
Last Updated 26 ಮೇ 2024, 4:59 IST
ಎಸ್. ಬಿ. ತೋಡಕರ್, ಮುಖ್ಯಾಧಿಕಾರಿ
ಎಸ್. ಬಿ. ತೋಡಕರ್, ಮುಖ್ಯಾಧಿಕಾರಿ   

ಮಸ್ಕಿ: ಪಟ್ಟಣದ ಹೆದ್ದಾರಿ ಆಧುನೀಕರಣ ಕಾಮಗಾರಿ ಒತ್ತುವರಿ ತೆರವು ವಿಳಂಬದಿಂದ ನಿಧಾನಗತಿಯಲ್ಲಿ ಸಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಂದು ವರ್ಷದಿಂದ ಪುರಸಭೆಗೆ ಹಲವು ಭಾರಿ ಪತ್ರಗಳನ್ನು ಬರೆದು ಹೆದ್ದಾರಿ ಮಧ್ಯದಿಂದ ಎರಡು ಕಡೆ 15 ಮೀಟರ್ ಒಳಗೆ ಬರುವ ಕಟ್ಟಡಗಳ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ದರು.

ಪುರಸಭೆ ಮುಖ್ಯಾಧಿಕಾರಿ ಎಸ್.ಬಿ. ತೋಡಕರ್ ಅವರು ಗುರುತು ಮಾಡಿದ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ ಕೆಲವೊಂದು ಕಡೆ ತೆರವು ವಿಳಂಬವಾಗಿರುವುದು ಸಾರ್ವಜನಿಕರ ಆರೋಪಕ್ಕೆ ಕಾರಣವಾಗಿದೆ.

ADVERTISEMENT

ರಸ್ತೆ ಆಧುನೀಕರಣ ಆಗುತ್ತದೆ ಎಂಬ ಕಾರಣಕ್ಕೆ ಕೆಲವರು ಅಶೋಕ ವೃತ್ತದಿಂದ ಗಚ್ಚಿನಮಠದವರೆಗೆ ಪುರಸಭೆಗೆ ಸಹಕಾರ ನೀಡಿ ಸ್ವಇಚ್ಚೆಯಿಂದ ಒತ್ತುವರಿ ತೆರವು ಮಾಡಿಕೊಂಡಿದ್ದಾರೆ. ಮೂರು–ನಾಲ್ಕು ಕಡೆ ತೆರವಿಗೆ ಕೆಲವರು ಅಡ್ಡಿಪಡಿಸುತ್ತಿದ್ದು ಸರ್ವಿಸ್ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದೆ.

ಒತ್ತುವರಿ ತೆರವುಗೊಂಡರೆ ಮಾತ್ರ ರಸ್ತೆ ಬದಿಯ ವಿದ್ಯುತ್ ಕಂಬಗಳ ಸ್ಥಳಾಂತರ ಸಾಧ್ಯ ಎಂದು ಜೆಸ್ಕಾಂ ಎಇಇ ವೆಂಕಟೇಶ ಹೇಳಿದ್ದಾರೆ. ಕಂಬಳಿಗೆ ಸೂಕ್ತ ಸ್ಥಳ ಗುರುತಿಸಿಕೊಡುವಂತೆ ಪುರಸಭೆಗೆ ಪತ್ರ ಬರೆದಿದ್ದಾರೆ.

ಕನಕವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ರಸ್ತೆಯ ಎರಡು ಬದಿ ಎನ್.ಎ ಆಗಿ ಮಾರಾಟವಾಗಿವೆ. ನಿವೇಶನ ಖರೀದಿಸಿದವರು ಹೆದ್ದಾರಿ ನಿಯಮದಂತೆ ವಾಣಿಜ್ಯ ಮಳಿಗೆ, ಮನೆಗಳನ್ನು ಕಟ್ಟಿಸಿಕೊಂಡು ಹತ್ತಾರು ವರ್ಷಗಳಾಗಿವೆ.

ಹೆದ್ದಾರಿ ಮದ್ಯಭಾಗದಿಂದ 15 ಅಡಿ ಒಳಗೆ ಯಾವುದೇ ಕಟ್ಟಡಗಳು ಇಲ್ಲದಿದ್ದರೂ ಸಹ ಕಟ್ಟಡ ಒತ್ತುವರಿ ತೆರವು ಮಾಡುವಂತೆ ಜಮೀನಿನ ಮಾಲೀಕರಿಗೆ ನೋಟೀಸ್ ನೀಡಿ ಪುರಸಭೆ ಎಡವಟ್ಟು ಮಾಡಿಕೊಂಡಿದೆ.

ಪುರಸಭೆ ನೀಡಿದ ನೋಟೀಸ್ ಮೇಲೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಶಾಸಕರು, ಸಹಾಯಕ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿ ಕಾಮಗಾರಿ ಆರಂಭಕ್ಕೆ ಗಮನಹರಿಸಲಿ ಎಂಬುದು ಸಾರ್ವಜನಿಕರ ಆಗ್ರಹ.

ರವಿಕುಮಾರ ಚಿಗರಿ
ಹೆದ್ದಾರಿ ತೆರವು ವಿಳಂಭದಿಂದ ಮಸ್ಕಿ ಪಟ್ಟಣದ ಸರ್ವೀಸ್ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದು

ಕಟ್ಟಡಗಳ ಒತ್ತುವರಿ ತೆರವು ಬಹುತೇಕ ಮಾಡಲಾಗಿದೆ. ಕೆಲವೊಬ್ಬರು ತಾವೇ ತೆಗೆದುಕೊಳ್ಳುತ್ತೇವೆ ಎಂದು ಲಿಖಿತವಾಗಿ ಬರೆದು ಕೊಟ್ಟಿದ್ದರಿಂದ ಬಿಡಲಾಗಿದೆ. ಮೂರು ದಿನ ಕಾದು ಪುರಸಭೆಯಿಂದ ತೆರವುಗೊಳಿಸಲಾಗುವುದು

-ಎಸ್. ಬಿ. ತೋಡಕರ್ ಪುರಸಭೆ ಮುಖ್ಯಾಧಿಕಾರಿ ಮಸ್ಕಿ

ಪುರಸಭೆ ಅಧಿಕಾರಿಗಳು ಬಾಕಿ ಉಳಿದಿರುವ ಹೆದ್ದಾರಿ ಒತ್ತುವರಿಗಳನ್ನು ಶೀಘ್ರ ತೆರವುಗೊಳಿಸಿ ರಸ್ತೆ ಕಾಮಗಾರಿಗೆ ಬೇಗ ಮುಗಿಸಲು ಸಹಕಾರ ನೀಡುವ ಮೂಲಕ ವಾಹನ ದಟ್ಟಣಿಗೆ ಶಾಸ್ವತ ಪರಿಹಾರ ನೀಡಲು ಮುಂದಾಗಲಿ

-ರವಿಕುಮಾರ ಚಿಗರಿ ಭೋವಿ ಯುವ ಸಮಾಜದ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.