ಮಸ್ಕಿ: ಹಾಳಾಗುತ್ತಿರುವ ಪರಿಸರ ರಕ್ಷಣೆಗಾಗಿ ಮರ ಬೆಳೆಸುವ ಅಭಿಯಾನಕ್ಕೆ ಕೈಗೊಂಡಿರುವ ಕಾರಮಂಗಿ ಕುಟುಂಬದ ಸದಸ್ಯರು ಮನೆಗೊಂದು ಮರ ಅಭಿಯಾನ ಕೈಗೊಂಡಿದ್ದು ಎಲ್ಲರ ಗಮನ ಸೆಳೆಯತೊಡಗಿದೆ.
ಮಲ್ಲೇಶ ಮತ್ತು ಅವರ ಸಹೋದರರು ಪಟ್ಟಣದಲ್ಲಿ ಪ್ರಭು ಸ್ಟುಡಿಯೊ ಆರಂಭಿಸಿ ಹೈಟೆಕ್ ತಂತ್ರಜ್ಞಾನದ ಸ್ಪರ್ಶ ನೀಡಿದ್ದು ರಾಜ್ಯದ ಗಮನ ಸೆಳೆದಿತ್ತು. ಇದೀಗ ಈ ಕುಟುಂಬದ ಸದಸ್ಯರು ‘ಪ್ರಭು ನಿಸರ್ಗಧಾಮ’ದ ಸಂಸ್ಥೆಯನ್ನು ಆರಂಭಿಸುವ ಮೂಲಕ ತಾಲ್ಲೂಕಿನಾದ್ಯಂತ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಮುಂದಾಗಿದೆ. ಸಂಸ್ಥೆ ಆರಂಭಿಸಿದ ಕೆಲವೇ ದಿನಗಳಲ್ಲಿ 2 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಶಾಲಾಕಾಲೇಜು, ದೇವಸ್ಥಾನ, ರಸ್ತೆ ಬದಿಯಲ್ಲಿ ಹಚ್ಚುವ ಮೂಲಕ ಮೂಲಕ ಪರಿಸರ ಜಾಗೃತಿಗೆ ಮುಂದಾಗಿದೆ.
ಇಡೀ ಕುಟುಂಬದ ಸದಸ್ಯರು ಮನೆ ಮನೆಗೆ ತೆರಳಿ ಮನೆ ಮುಂದೆ ಸಸಿ ಹಚ್ಚುವಂತೆ ಮನವಿ ಮಾಡುವ ಜೊತೆಗೆ ಕುಟುಂಬದ ಸದಸ್ಯರೊಂದಿಗೆ ಸಸಿ ಹಚ್ಚಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಸಸಿಗಳನ್ನು ಹಚ್ಚಲು ಮುಂದೆ ಬರುವವರಿಗೆ ಉಚಿತ ಸಸಿ ಪೂರೈಕೆ ಮಾಡಲಾಗುತ್ತಿದೆ ಎಂದು ನಿಸರ್ಗ ಧಾಮದ ಮಲ್ಲೇಶ ಕಾರಮಂಗಿ ಹಾಗೂ ಶ್ರೀಶೈಲ ಕಾರಮಂಗಿ ತಿಳಿಸಿದ್ದಾರೆ.
‘ಮದುವೆ ಸಮಾರಂಭ, ಹುಟ್ಟು ಹಬ್ಬದ ಸಂದರ್ಭದಲ್ಲಿ ಅದರ ನೆನಪಿಗಾಗಿ ಮನೆ ಮುಂದೆ, ಅಥವಾ ರಸ್ತೆಯ ಅಕ್ಕಪಕ್ಕದಲ್ಲಿ ಮರ ಬೆಳೆಸಲು ಮುಂದಾಗಿ, ಇದರಿಂದ ನಮ್ಮ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ಸಿಕ್ಕಂತಾಗುತ್ತದೆ’ ಎಂದು ಶ್ರೀಶೈಲ ಕಾರಮಂಗಿ ಮನವಿ ಮಾಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಆರಂಭವಾದ ಪ್ರಭು ನಿಸರ್ಗ ಧಾಮದ ಮನೆಗೊಂದು ಮರ ಅಭಿಯಾನದಲ್ಲಿ ಕಾರಮಂಗಿ ಕುಟುಂಬದ ಮಹಿಳೆಯರು, ಮಕ್ಕಳು, ಸದಸ್ಯರು ಪಾಲ್ಗೊಂಡು ಅಭಿಯಾನ ಯಶಸ್ವಿಗೆ ಶ್ರಮಿಸುತ್ತಿರುವುದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.