ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜೂ27ರಂದು ನ್ಯಾಕ್ ತಂಡ ಭೇಟಿ ನೀಡಲಿದೆ. ಮೂಲಸೌಕರ್ಯ ಅಗತ್ಯ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಯಂಕಣ್ಣ ಹೇಳಿದರು.
ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಕೊಡಟಿ ವಿಯ್ಯಣ್ಣ ರಾವ್ ನೇತೃತ್ವದ ತಂಡ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಅಭಿವೃದ್ದಿ ಹಾಗೂ ಪ್ರಗತಿ ಹಾಗೂ ಸಾಧನೆಗಳ ಮೌಲ್ಯಮಾಪನ ಮಾಡಲಿದ್ದಾರೆ ಎಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ಐದು ವರ್ಷಗಳ ಕೆಳಗೆ ನ್ಯಾಕ್ ತಂಡ ಆಗಮಿಸಿ ಕಾಲೇಜಿನ ಸ್ಥಿತಿಗತಿಗಳ ಅಧ್ಯಯನ ಮಾಡಿ ಬಿ ಗ್ರೇಡ್ ನೀಡಿತ್ತು. ಈಗ ಮತ್ತೇ ತಂಡ ನ್ಯಾಕ್ ತಂಡ ಆಗಮಿಸಲಿದ್ದು, ಕಾಲೇಜಿನಲ್ಲಿ ಗುಣಮಟ್ಟದ ಬೋಧನೆ, ವಿದ್ಯಾರ್ಥಿಗಳ ಜೊತೆ ವಿವಿಧ ಕಾರ್ಯ ಚಟುವಟಿಕೆ, ಕ್ರೀಡೆ, ಮೂಲಸೌಕರ್ಯ ಹಾಗೂ ಇತರೆ ಸ್ಥಿತಿಗತಿ ಉತ್ತಮವಾಗಿದೆ ಹೀಗಾಗಿ ಈ ಬಾರಿ ‘ಎ’ ಗ್ರೇಡ್ ಸಿಗುವ ನಿರೀಕ್ಷೆ ಇದೆ ಎಂದರು.
ಕಾಲೇಜು ಅಭಿವೃದ್ದಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಡಾ. ಶಿವರಾಜ ಪಾಟೀಲ, ಸಚಿವ ಎನ್.ಎಸ್. ಬೋಸರಾಜು, ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ ಅವರ ಸಹಕಾರದಿಂದ ಕಾಲೇಜು ಈ ಸ್ಥಾನಕ್ಕೆ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನ್ಯಾಕ್ ತಂಡ ಭೇಟಿ ನೀಡುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಂದ, ಹಳೆಯ ವಿದ್ಯಾರ್ಥಿಗಳಿಗಾಗಿಯೇ ಕೆಲವು ಸಭೆಗಳನ್ನು ಏರ್ಪಡಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಮನವಿ ಮಾಡಿದರು.
ಸಿ. ಚಂದ್ರಶೇಖರ್, ಮಹಾಂತೇಶ ಅಂಗಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.