ಲಿಂಗಸುಗೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ನಿಯಮಿತದ ಪ್ರಸರಣ ಮಾರ್ಗ ಮತ್ತು ಉಪ ಕೇಂದ್ರಗಳ ವಿಭಾಗ ಕಚೇರಿ ಸ್ಥಳಾಂತರ ಬೇಡ. ಲಿಂಗಸುಗೂರು ತಾಲ್ಲೂಕು ಕೇಂದ್ರದಲ್ಲಿಯೇ ಮುಂದುವರೆಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಒತ್ತಾಯಿಸಿದೆ.
ಗುರುವಾರ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶವರ್ಮಾ ಅವರಿಗೆ ಮನವಿ ಸಲ್ಲಿಸಿ, ಆಡಳಿತಾತ್ಮಕ ಮತ್ತು ನೌಕರರ ಹಿತದೃಷ್ಠಿಯಿಂದ 2004ರಲ್ಲಿ ವಿಭಾಗೀಯ ಕಚೇರಿ ಆರಂಭಗೊಂಡಿದೆ. ಅಂದಿನಿಂದ ಎರಡು ಜಿಲ್ಲೆಗಳ ಆಡಳಿತ ಮತ್ತು ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತ ಬಂದಿದೆ. ಕಚೇರಿ ಸ್ವಂತ ಕಟ್ಟಡ ಹೊಂದಿದೆ. ಪೀಠೋಪಕರಣ ಹಾಗೂ ಅಗತ್ಯ ಸೌಲಭ್ಯಗಳು ಇವೆ. ಹೆಚ್ಚುವರಿ ಹಾಗೂ ಕಾಯಂ ಅಧಿಕಾರಿಗಳ ನಿಯೋಜನೆ ಮಾಡಿದರೆ ಮತ್ತಷ್ಟು ಸೇವೆ ಸಲ್ಲಿಸಲು ಅನುವಾಗುತ್ತದೆ. ರಾಯಚೂರಿಗೆ ಸ್ಥಳಾಂತರಿಸಿದರೆ ನೌಕರರಿಗೂ ತೊಂದರೆ ಆಗುತ್ತದೆ ಎಂದರು.
ರಾಯಚೂರು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರ ಮಾಡಿದರೆ ಕೊಪ್ಪಳ ಜಿಲ್ಲೆಯವರಿಗೆ 220ಕಿ.ಮೀ ದೂರವಾಗುತ್ತದೆ. ಕಾರಣ ಎಲ್ಲ ನೌಕರರಿಗೆ ಲಿಂಗಸುಗೂರು ಅನುಕೂಲ ಸ್ಥಳವಾಗಿದೆ. ಕಾಯಂ ಇಇ ಮತ್ತು ಲೆಕ್ಕಾಧಿಕಾರಿ ನೇಮಕ ಮಾಡಿ ಸಿಬ್ಬಂದಿಗಳ ಕೊರತೆ ನಿವಾರಿಸಬೇಕು ಎಂದರು.
ನೌಕರರ ಸಂಘದ ಸಿಇಸಿ ನಿರ್ದೇಶಕ ವೆಂಕಟೇಶ, ತಾಲ್ಲೂಕು ನೌಕರರ ಪ್ರಾಥಮಿಕ ಸಮಿತಿ ಅಧ್ಯಕ್ಷ ಮೌನೇಶ ಕುರಿ, ಕಾರ್ಯದರ್ಶಿ ಅಮರೇಗೌಡ ಮಾಲಿ ಪಾಟೀಲ್, ಸದಸ್ಯರಾದ ಕೆ.ಬಸವರಾಜ, ಅಂಬರೀಶ ಬಂಡೆಪ್ಪ, ರಾಮಲಿಂಗ, ಪ್ರವೀಣಕುಮಾರ ಅಂಗಡಿ, ಸಂತೋಷ ಸಿಂಘೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.