ADVERTISEMENT

ಪ್ರಿಯಕರನಿಗಾಗಿ ಒಡವೆ ಕದ್ದ ಯುವತಿ: ಮರ್ಯಾದೆಗೆ ಹೆದರಿ ತಂದೆ-ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 15:50 IST
Last Updated 10 ಮಾರ್ಚ್ 2024, 15:50 IST
ರೈಲ್ವೆ ಹಳಿ
ರೈಲ್ವೆ ಹಳಿ    

ರಾಯಚೂರು: ಯರಮರಸ್ ರೈಲ್ವೆ ಹಳಿಯ ಬಳಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹೊಸ ತಿರುವು ಪಡೆದಿದೆ. ಪ್ರಿಯಕರನಿಗೆ ಕಳ್ಳತನ ಮಾಡಿ ಚಿನ್ನದ ಸರ ಕೊಟ್ಟು ತಂದೆ ತಾಯಿಯ ಜೀವಕ್ಕೆ ಕುತ್ತು ತಂದ ವಿಷಯ ಬಹಿರಂಗವಾಗಿದೆ.

ನಗರದ ಹೊರವಲಯದ ಯರಮರಸ್ ರೈಲ್ವೆ ಸೇತುವೆ ಬಳಿ ಶನಿವಾರ ಐ.ಬಿ ಕಾಲೊನಿಯ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ಇಬ್ಬರು ಮೃತಪಟ್ಟರೆ, ಯುವತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಘಟನೆ ವಿವರ: ನಗರದ ಐ.ಬಿ. ಕಾಲೊನಿಯ ನಿವಾಸಿ ಸಮೀರ್ ಅಹ್ಮದ್ ಹಾಗೂ ಜುಲೇಖಾ ಬೇಗಂ ದಂಪತಿಯ ಮಗಳು ಮೆಹಮೂನಾ ಬೇಗಂ ನಗರದ ಮೆಹಮೂದ್ ಹುಸೇನ್ ಅವರ ಮಗನಿಗೆ ಮನೆ ಪಾಠ ಹೇಳಿಕೊಡುತ್ತಿದ್ದಳು. ಇದೇ ಅವಧಿಯಲ್ಲಿ ಸರ್ಫರಾಜ್‌ನನ್ನು ಪ್ರೀತಿಸುತ್ತಿದ್ದಳು.

ಮೆಹಮೂದ್ ಹುಸೇನ್ ಮನೆಯಲ್ಲಿ ಡೈಮಂಡ್ ನಕ್ಲೇಸ್ ಹಾಗೂ ಚಿನ್ನ ಕಳ್ಳತನವಾಗಿತ್ತು. ಹೀಗಾಗಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸರ್ಫರಾಜ್ ಗೆ ಗಿಫ್ಟ್ ನೀಡುವ ಉದ್ದೇಶದಿಂದ‌ ಮೆಹಮುನಾ ಕಳ್ಳತನ ಮಾಡಿದ್ದಳು.

ADVERTISEMENT

ಪೊಲೀಸರ ವಿಚಾರಣೆಗೆ ಹೆದರಿದ ಮೆಹಮುನಾ ಕದ್ದ ಚಿನ್ನವನ್ನು ಗೋಪ್ಯವಾಗಿ ವಾಪಸ್‌ ಕಿಟಿಕಿ ಮೂಲಕ ಕೊಠಿಯೊಳಗೆ ಎಸೆದಿದ್ದಳು. ಅದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಳು.

ಕದ್ದ ಚಿನ್ನದಲ್ಲಿನ ಒಂದು ಬ್ರೆಸ್‌ಲೆಟ್ ಅನ್ನು ಪ್ರಿಯಕರನಿಗೆ ಉಡುಗೊರೆಯಾಗಿ ಕೊಟ್ಟಿದ್ದಳು. ಮಾಲೀಕರು ಎಲ್ಲ ಚಿನ್ನ ವಾಪಸ್ ಕೊಡುವಂತೆ ಗಡುವು ನೀಡಿದ್ದರು. ಮೆಹಮುನಾ ಪ್ರಿಯಕನಿಗೆ ಕೊಟ್ಟ ಬ್ರೆಸ್‌ಲೆಟ್ ಮರಳಿ ಕೊಡುವಂತೆ ಕೇಳಿದ್ದಳು. ಆದರೆ, ಆತ ಬ್ರೆಸ್‌ಲೆಟ್ ವಾಪಾಸ್‌ ಕೊಡದೇ ಮೊಬೈಲ್‌ ಫೋನ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದ. ಮೆಹಮುನಾ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಮಗಳು ಮಾಡಿದ ತಪ್ಪಿನಿಂದಾಗಿ ನೊಂದಿದ್ದ ತಂದೆ ಸಮೀರ್ ಅಹದ್, ತಾಯಿ ಜುಲೇಖಾ ಬೇಗಂ ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿಯ ಮೇಲೆ ಬಿದ್ದಿದ್ದರು. ಈ ಘಟನೆಯಲ್ಲಿ ಮೆಹಮುನಾ ಗಂಭೀರ ಗಾಯಗೊಂಡಿದ್ದಾಳೆ. ರಾಯಚೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.