ಸಿಂಧನೂರು: ಕೆಡುಕಿನ ವಿರುದ್ಧ ಹೋರಾಟ ನಡೆಸುವ ಮೂಲಕ ಸಮಾಜಕ್ಕೆ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದು, ಅವರ ನಡೆ-ನುಡಿ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅಭಿಪ್ರಾಯಪಟ್ಟರು.
ನಗರದ ಮಹಿಬೂಬಿಯಾ ಕಾಲೊನಿಯಲ್ಲಿರುವ ನೂರಾನಿ ಮಸ್ಜೀದ್ನಲ್ಲಿ ಸೋಮವಾರ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದುನ್ನಬೀ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶ್ರೇಷ್ಠ ದಾರ್ಶನಿಕರಲ್ಲಿ ಪೈಗಂಬರರು ಒಬ್ಬರಾಗಿದ್ದು, ಮೂಢನಂಬಿಕೆ, ಅರಾಜಕತೆ ವಿರುದ್ಧ ಹೋರಾಡಿ ಮೆಟ್ಟಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ’ ಎಂದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ‘ಮನುಕುಲದ ಉದ್ಧಾರಕ್ಕೆ ಕುರ್ ಆನ್ ಪವಿತ್ರ ಗ್ರಂಥವಾಗಿದ್ದು, ಇದರ ಸಮಗ್ರ ಅಧ್ಯಯನವನ್ನು ವಿದ್ಯಾರ್ಥಿ-ಯುವಜನರು ಮಾಡುವುದು ಅತ್ಯಗತ್ಯವಾಗಿದೆ. ಧರ್ಮ, ಜಾತಿಗಿಂತ ಮನುಷ್ಯತ್ವ ಮುಖ್ಯ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿ, ‘ಶಾಂತಿ, ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುವ ಮೂಲಕ ಸಿಂಧನೂರು ಭಾವೈಕ್ಯದ ತಾಣವಾಗಿದೆ’ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಕೆ.ಕರಿಯಪ್ಪ, ಹಿರಿಯ ಮುಖಂಡ ಬಾಬರ್ಪಾಷಾ ಜಾಗೀರದಾರ್, ಮೌಲಾನ ತಾಜುದ್ದೀನ್, ವಕೀಲ ನಿರುಪಾದೆಪ್ಪ ಗುಡಿಹಾಳ, ಮುಖಂಡ ಎಚ್.ಎನ್.ಬಡಿಗೇರ, ಡಿವೈಎಸ್ಪಿ ಬಿ.ಎಸ್. ತಳವಾರ ಮಾತನಾಡಿದರು.
ಸರ್ಕಲ್ ಇನ್ಸ್ಪೆಕ್ಟರ್ ವೀರಾರೆಡ್ಡಿ, ಪೊಲೀಸ್ ಇನ್ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್, ಮುಖಂಡರಾದ ಅಬ್ದುಲ್ ಗನಿಸಾಬ ವಕೀಲ, ಶೇಖಣ್ಣ ಏತ್ಮಾರಿ, ಚಿಟ್ಟೂರಿ ಶ್ರೀನಿವಾಸ, ಹಾರೂನ್ಪಾಷಾ ಜಾಗೀರದಾರ್, ಖಾಜಿಮಲಿಕ್ ವಕೀಲ, ಎಂ.ಡಿ.ನದೀಮ್ ಮುಲ್ಲ, ಶಿವುಕುಮಾರ ಗುಂಜಳ್ಳಿ, ಎಚ್.ಬಾಷಾ, ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಲಿಂಗಾಧರ ಗುರುಸ್ವಾಮಿ, ಮಹ್ಮದ್ ಮುಸ್ತಫಾ, ಸುರೇಶ ಗೊಬ್ಬರಕಲ್, ವೀರೇಶ ರಾರಾವಿ ಇದ್ದರು. ಮುರ್ತುಜಾಹುಸೇನ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.