ರಾಯಚೂರು: ‘ಹೊಸ ಸ್ಕ್ಯಾನಿಂಗ್ ಸೆಂಟರ್ಗಳನ್ನು ಆರಂಭಿಸಲು ನೋಂದಣಿ ಕಡ್ಡಾಯವಾಗಿದೆ. ಅಧಿಕಾರಿಗಳು ಸ್ಕ್ಯಾನಿಂಗ್ ಸೆಂಟರ್ಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಬೇಕು’ ಎಂದು ಪಿಸಿಪಿಎನ್ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಶಿವಪ್ಪ ಮಾಲೀಪಾಟೀಲ ಸೂಚಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾ ಗರ್ಭ ಪೂರ್ವ ಲಿಂಗ ಆಯ್ಕೆ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆಯ (ಪಿ.ಸಿ.ಪಿ.ಎನ್.ಡಿ.ಟಿ) ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ರೇಡಿಯೋಲಾಜಿಸ್ಟ್, ಸೋನಾಲಾಜಿಸ್ಟ್ ನಂತಹ ಪರೀಕ್ಷೆ ಕೈಗೊಳ್ಳುವವರ ನೋಂದಣಿ ಕಡ್ಡಾಯವಾಗಿದೆ. ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯನ್ವಯ ಜೆನೆಟಿಕ್ ಸಮಾಲೋಚನೆ ಕೇಂದ್ರಗಳು, ಪ್ರಯೋಗಾಲಯಗಳು ಮತ್ತು ಚಿಕಿತ್ಸಾ ಕೇಂದ್ರಗಳು ಸಹ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಯವಾಗಿ ನೊಂದಣಿ ಮಾಡಿಕೊಂಡಿರಬೇಕು’ ಎಂದು ಹೇಳಿದರು.
‘ಗರ್ಭ ಪೂರ್ವ ಲಿಂಗ ಆಯ್ಕೆ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದೆ. ಇದು ಲಿಂಗ ತಾರತಮ್ಯಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ. ಹೀಗಾಗಿ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ, ಸ್ತ್ರೀ ರೋಗತಜ್ಞೆ ಡಾ.ರಾಜಕುಮಾರಿ, ಎಲ್.ವಿ.ಡಿ ಕಾಲೇಜಿನ ಸಹಾಯಕ ಪ್ರೊ.ಡಾ.ಅರುಣಾ ಹಿರೇಮಠ, ಐಆರ್ಐಎನ ರೆಡಿಯೊಲಾಜಿಸ್ಟ್ ಡಾ.ರಾಘವೇಂದ್ರ, ಡಾ.ಶ್ರೀಲತಾ ಪಾಟೀಲ, ರೋಟರಿ ಕ್ಲಬ್ನ ರಂಗಲಿಂಗೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.