ಸಿಂಧನೂರು: ದಲಿತ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಬಹುತ್ವ ಭಾರತೀಯರ ಭಾವೈಕ್ಯ ಸಮಾವೇಶ ಭಾನುವಾರ (ಮೇ 8) ಬೆಳಿಗ್ಗೆ ನಗರದ ಎಪಿಎಂಸಿ ಆವರಣದಲ್ಲಿ ನಡೆಯಲಿದೆ.
ಸಮಾವೇಶದ ಹಿನ್ನೆಲೆಯಲ್ಲಿ ಶನಿವಾರ ನಗರದ ವಿವಿಧ ವಾರ್ಡ್ ಹಾಗೂ ಹಳ್ಳಿಗಳಲ್ಲಿ ಪ್ರಚಾರ ನಡೆಸಲಾಯಿತು.
ಒಕ್ಕೂಟದ ಪ್ರಧಾನ ಸಂಚಾಲಕ ಡಿ.ಎಚ್.ಪೂಜಾರ್ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾತಿ, ಧರ್ಮ, ದೇವರು, ಗೋಹತ್ಯೆ ಹೆಸರಿನಲ್ಲಿ ಭಾವನಾತ್ಮಕವಾಗಿ ಕೆದಕಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಈ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.
ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ವೈಫಲ್ಯತೆ ಹಾಗೂ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಜನವಿರೋಧಿ ನೀತಿಗಳನ್ನು ಮರೆಮಾಚಲು ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಅಝಾನ್ಗೆ ವಿರೋಧ ಮಾಡಿ ಒಂದು ಧರ್ಮವನ್ನು ಗುರಿಯಾಗಿಸಿ ಕೋಮು ಪ್ರಚೋದನೆ ಮಾಡುತ್ತಿರುವುದು ದುರಂತ. ಇದನ್ನು ಜಾತ್ಯತೀತ ಮನಸುಗಳು ಖಂಡಿಸಿ, ಸಾಮಸ್ಯರ ಸಾರಬೇಕಿದೆ. ಈ ನಿಟ್ಟಿನಲ್ಲಿ ಸಿಂಧನೂರಿನಲ್ಲಿ ಬಹುತ್ವ ಭಾರತೀಯ ಭಾವೈಕ್ಯತಾ ಸಮಾವೇಶ ಏರ್ಪಡಿಸಲಾಗಿದೆ ಎಂದು ಹೇಳಿದರು.ಒಕ್ಕೂಟದ ಸಂಚಾಲಕ ಎಂ.ಗಂಗಾಧರ್, ಆರ್.ಬೋನ್ವೆಂಚರ್, ನಾರಾಯಣ ಬೆಳಗುರ್ಕಿ, ಕೆ.ಮರಿಯಪ್ಪ, ಅಲ್ಲಮಪ್ರಭು ಪೂಜಾರ್, ನರಸಪ್ಪ ಕಟ್ಟಿಮನಿ, ವಿಜಯಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.