ಮಾನ್ವಿ: ‘ಪಟ್ಟಣದಲ್ಲಿ ರಸ್ತೆ ಜಾಗ ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದ್ದು, ಒತ್ತುವರಿ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿ ಸಾರ್ವಜನಿಕರು ಸೋಮವಾರ ತಹಶೀಲ್ದಾರ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.
‘ಪಟ್ಟಣದ ಯರಮಲದೊಡ್ಡಿ ರಸ್ತೆಯ ಸರ್ವೆ ನಂ.127/3ರಲ್ಲಿ 1 ಎಕರೆ 12 ಗುಂಟೆ ಜಮೀನಿನಲ್ಲಿ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಿ, ಕಟ್ಟಡ ನಿರ್ಮಾಣ ಮಾಡಲಾಗಿದೆ. ಸದರಿ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವಸತಿ ಶಾಲೆಗೆ ಬಾಡಿಗೆ ನೀಡಲಾಗಿದೆ. ಈ ಕಟ್ಟಡದ ಮುಂಭಾಗದಿಂದ ಹಜರತ್ ಸೈಯದ್ ತಾಜುದ್ದೀನ್ ಬಾಬಾ ಮತ್ತು ಹಜರತ್ ಸೈಯದ್ ಸಿರಾಜುದ್ದೀನ್ ಬಾಬಾ ದರ್ಗಾಕ್ಕೆ ತೆರಳುವ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿ, ನಿಯಮಬಾಹಿರವಾಗಿ ರಸ್ತೆಯ ಅತಿಕ್ರಮಣ ಹಾಗೂ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.
ಶಿರಸ್ತೇದಾರ್ ವಿನಾಯಕರಾವ್ ಮನವಿ ಪತ್ರ ಸ್ವೀಕರಿಸಿದರು. ಸಾಮಾಜಿಕ ಕಾರ್ಯಕರ್ತ ಜಾವೀದ್ ಖಾನ್, ನರಸಪ್ಪ ಜೂಕೂರು, ಸೈಯದ್ ಮುಷ್ತಾಕ್ ಖಾದ್ರಿ, ಸೈಯದ್ ಮುದಾಸ್ಸಿರ್ ಹುಸೇನಿ, ಸಮೀರ್ ಪಾಷಾ, ಅಮ್ಜದ್ ಖಾನ್, ಬಾಷಾ ನದಾಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.