ಲಿಂಗಸುಗೂರು: ರಾಷ್ಟ್ರೀಯ ಮಕ್ಕಳ ಶಿಕ್ಷಣ ನೀತಿ ಭಾಗವಾಗಿ 6 ವರ್ಷದೊಳಗಿನ ಮಕ್ಕಳು ದೇಶದ ಸಂಪತ್ತು ಮಾತ್ರವಲ್ಲದೇ ಸಮಾಜದ ಪುನರುತ್ಪಾದನೆ ಎಂಬ ಘೋಷಣೆಯಡಿ ಮಕ್ಕಳ ರಕ್ಷಣೆಗಾಗಿ 1975ರಲ್ಲಿ ಅನುಷ್ಠಾನಕ್ಕೆ ತಂದಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ರಕ್ಷಣೆಗೆ ಸರ್ಕಾರ ಮುಂದಾಗುವಂತೆ ಅಂಗನವಾಡಿ ನೌಕರರು ಮನವಿ ಸಲ್ಲಿಸಿದರು.
ಗುರುವಾರ ಶಾಸಕ ಮಾನಪ್ಪ ವಜ್ಜಲರಿಗೆ ಮನವಿ ಸಲ್ಲಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಪ್ರತ್ಯೇಕವಾಗಿ ಯೋಜನೆಗಳನ್ನು ರೂಪಿಸುತ್ತಿರುವುದು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸರ್ಕಾರ ಹೊಸ ಶಿಕ್ಷಣ ನೀತಿಯಡಿ ಅನುಷ್ಠಾನಗೊಳಿಸುವ ಎಲ್ಕೆಜಿ, ಯುಕೆಜಿ ಪದ್ಧತಿ ತಡೆಯುವಂತೆ ಆಗ್ರಹಿಸಿದರು.
ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದ ಶಿಕ್ಷಣ ಇಲಾಖೆ ಏಕಮುಖವಾಗಿ ವರ್ಷದಿಂದ ವರ್ಷಕ್ಕೆ ಕೆಪಿಎಸ್ ಶಾಲೆಗಳನ್ನು ಆರಂಭಿಸುತ್ತಿದೆ. ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ಆಯೋಗ ರಚನೆ ಮಾಡಿದೆ. ಆಯೋಗದ ವರದಿ ನಂತರದಲ್ಲಿ ಎಲ್ಕೆಜಿ, ಯುಕೆಜಿ ಆರಂಭಕ್ಕೆ ಮುಂದಾಗಲಿ. ಅಂಗನವಾಡಿ ಕೇಂದ್ರದ ಮಕ್ಕಳೇ ಎಲ್ಕೆಜಿ, ಯುಕೆಜಿ ತರಗತಿಗಳಿಗೆ ದಾಖಲಾತಿ ಮಾಡುತ್ತಿದ್ದು, ಗೊಂದಲ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.
ಎಐಸಿಟಿಯು ಮತ್ತು ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರ ಸಂಘದ ಮುಖಂಡರಾದ ಸರಸ್ವತಿ ಈಚನಾಳ, ಬಸಮ್ಕ ಬಯ್ಯಾಪುರ, ಲಕ್ಷ್ಮೀ ನಗನೂರು, ಮಹೇಶ್ವರಿ ಹಟ್ಟಿ, ಮಲ್ಲನಗೌಡ ಮುದಗಲ್ಲ, ರಮೇಶ ವೀರಾಪುರ. ರೇಣುಕಾ ಕಲ್ಲೂರು, ಶ್ಯಾವಮ್ಮ ಝೂಲಗುಡ್ಡ, ಮಹಾದೇವಮ್ಮ ಲಿಂಗಸುಗೂರು, ನಾಗರತ್ನ, ಸುವರ್ಣ, ಸಾವಿತ್ರಿದೇವಿ, ನೀಲಮ್ಮ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.