ಲಿಂಗಸುಗೂರು: ‘ಆಧುನಿಕತೆ ಭರಾಟೆಯಲ್ಲಿ ಹಳೆಯ ಉಡುಗೆ ತೊಡುಗೆ, ಆಹಾರ ಪದ್ಧತಿ ಸಿದ್ಧತೆ, ಕೃಷಿ ಚಟುವಟಿಕೆ, ಮಹಿಳೆಯರ ಕೌಶಲ, ಹೈನುಗಾರಿಕೆ, ಬಡಿಗತನ ಸೇರಿದಂತೆ ಶಾಲಾ ಮಕ್ಕಳಿಂದಲೇ ಗ್ರಾಮೀಣ ಸೊಗಡು ಪ್ರತಿಬಿಂಬಿಸುವ ಪ್ರದರ್ಶನ ಅಚ್ಚುಕಟ್ಟಾಗಿ ನಡೆದಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳವಾರ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನೂರು ದಿನದ ಓದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವೈಭವ ಪೂರಿತ, ಮಕ್ಕಳ ಕ್ರಿಯಾಶೀಲತೆಯ ಚಟುವಟಿಕೆ, ಪೂರ್ವಜರ ಬದುಕು, ಶೈಲಿಯನ್ನು ನೆನೆಪಿಸುವಂತಿದೆ. ಮಕ್ಕಳ ಪ್ರತಿಭೆಗೆ ಶಿಕ್ಷಕರ ಪ್ರೋತ್ಸಾಹ ಕಂಡು ಹರ್ಷ ಮೂಡಿಸಿದೆ’ ಎಂದರು.
ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ‘ಕೃಷಿ ಚಟುವಟಿಕೆ, ಹೈನುಗಾರಿಕೆ, ಮನೆ ಕೆಲಸಗಳು, ರೊಟ್ಟೆ ತಟ್ಟುವುದು, ಬಡಿಗತನ, ಕವಿ ಕಾವ್ಯ ಪರಿಚಯಿಸುವಂತ ಉಡುಗೆ ತೊಡುಗೆ, ವೃತ್ತಿ ಕೌಶಲಗಳ ವಿಭಿನ್ನ ವೇಷಗಳ ಪ್ರದರ್ಶನ ಸೇರಿದಂತೆ ಅಧುನಿಕತೆ ಭರಾಟೆ ಮರೆತು ಹಳೆಯ ಗ್ರಾಮೀಣ ಸೊಗಡಲ್ಲಿ ತಲ್ಲೀನರಾಗಿರುವಂತೆ ಮಕ್ಕಳು ಪ್ರದರ್ಶನ ನೀಡಿದ್ದಾರೆ. ಶಿಕ್ಷಕರ ಪರಿಶ್ರಮವು ಅಡಗಿದ್ದು ಇದೊಂದು ವಿಶೇಷ ಕಾರ್ಯಕ್ರಮವಾಗಿ ಹೊರ ಹೊಮ್ಮಿದೆ’ ಎಂದು ಹರ್ಷ ಹಂಚಿಕೊಂಡರು.
ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಕರಡಿ ಮಾತನಾಡಿ, ‘ಶಾಲಾ ಮಕ್ಕಳು ಶಿಕ್ಷಕರ ಪ್ರೋತ್ಸಾಹದಿಂದ ಚಕ್ಕಡಿಯಲ್ಲಿ ತಮ್ಮನ್ನು ಕರೆದುಕೊಂಡು ಬಂದು, ಗ್ರಾಮೀಣ ಸೊಗಡು ಪ್ರದರ್ಶನಕ್ಕೆ ಮುಂದಾಗಿದ್ದು ಖುಷಿ ತಂದಿದೆ. ತಾಲ್ಲೂಕಿನ ಪ್ರತಿ ಶಾಲೆಯಲ್ಲಿ ಮಕ್ಕಳ ಪ್ರತಿಭೆ ಗುರುತಿಸಲು ಇಂತಹ ಮಾದರಿ ಕಾರ್ಯಕ್ರಮ ಪ್ರೇರಣೆಯಾಗಬೇಕು’ ಎಂದರು.
ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಉರ್ದು ಶಾಲಾ ಮಕ್ಕಳು, ಶಿಕ್ಷಕ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.