ಜಾಲಹಳ್ಳಿ: ಸ್ಥಳೀಯ ನಿವಾಸಿ ಗೋವಿಂದ ಯಂಕಪ್ಪ ಉಪ್ಪರ್ ಕೋಟೆ ಎನ್ನುವ ವಿದ್ಯಾರ್ಥಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 95.84 ರಷ್ಟು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದೆ. ಕಳೆದ ಏಳು ವರ್ಷಗಳ ಹಿಂದೆಯೇ ತಂದೆಯನ್ನು ಕಳೆದು ಕೊಂಡು ತಾಯಿ ಹನುಮಂತಿ ಹಾಗೂ ಅಣ್ಣನೊಂದಿಗೆ ಸೇರಿಕೊಂಡು ಸಣ್ಣ ಚಹಾ ಹೋಟೆಲ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಾಲಹಳ್ಳಿಯಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆಯಲ್ಲಿ ಈ ವಿದ್ಯಾರ್ಥಿ ಗೋವಿಂದ ಉಪ್ಪಾರ್ ಮಿರ್ಜಿ ಬಜಿ ಹಾಕುವುದೇ ಕಾಯಕ ಮಾಡಿಕೊಂಡಿದ್ದು, ಕುಟುಂಬಕ್ಕೆ ಆಸರೆ ಅಗಿದ್ದಾರೆ.
ಈ ವಿದ್ಯಾರ್ಥಿ ಮುದ್ಗಲ್ ಪಟ್ಟಣದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತಿ ಸೋಮವಾರ ವಾರದ ಸಂತೆಯಲ್ಲಿ ಗಿರಾಕಿಗಳನ್ನು ಮಾಡಲು ತಾಯಿಗೆ ಅಣ್ಣನಿಗೆ ಆಸರೆ ಆಗುತ್ತಾನೆ. ಕಳೆದ ಎರಡು ವರ್ಷಗಳಿಂದ ವಾರದಲ್ಲಿ ಎರಡು ದಿನ ಹೋಟೆಲ್ ಕೆಲಸ ಮಾಡುವುದು ಉಳಿದ 5 ದಿನ ಶಾಲೆಗೆ ಹೋಗುವುದು ರೂಢಿ ಮಾಡಿಕೊಳ್ಳಲಾಗಿದೆ ಎಂದು ತಾಯಿ ಹನುಮಂತಿ ತಿಳಿಸಿದ್ದಾರೆ.
‘ಶಾಲೆಯಲ್ಲಿ ಎಲ್ಲಾ ಶಿಕ್ಷಕರ ನಿರಂತರ ಬೋಧನೆ, ವಿಶೇಷ ತರಗತಿಗಳನ್ನು ನಡುಸುತ್ತಿರುವುದರಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ’ ಎಂದು ವಿದ್ಯಾರ್ಥಿ ಗೋವಿಂದ ಹೇಳುತ್ತಾನೆ.
‘ನಾವು ಬಡವರು ದೊಡ್ಡ ಮಗ ಶಾಲೆಗೆ ಹೋಗದೇ ಅರ್ಧಕ್ಕೆ ಬಿಟ್ಟ. ಇನ್ನೂ ಸಣ್ಣ ಮಗನಿಗೆ ಮೊರಾರ್ಜಿ ಶಾಲೆಗೆ ಆಯ್ಕೆಯಾಗಿರುವುದರಿಂದ ಅಲ್ಲಿಯೇ ಬಿಡಲಾಯಿತು. ಮಗ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ್ದಾನೆ. ಮುಂದಿನ ಅಭ್ಯಾಸ ಮಾಡಿಸುವುದೇ ಚಿಂತೆಯಾಗಿದೆ’ ಎಂದು ತಾಯಿ ಹನುಮಂತಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.