ರಾಯಚೂರು: ‘ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಹರಿಯಾಣ ಸರ್ಕಾರ ಪ್ರಥಮವಾಗಿ ಸಚಿವ ಸಂಪುಟದಲ್ಲಿ ಜಾರಿ ಮಾಡಲು ನಿರ್ಣಯ ಕೈಗೊಂಡಿದಂತೆ ಕರ್ನಾಟಕ ಸರ್ಕಾರವೂವಿಳಂಬ ಮಾಡದೇ ಜಾರಿ ಮಾಡಿ ನುಡಿದಂತೆ ನಡೆದುಕೊಳ್ಳಬೇಕು’ ಎಂದು ಒಳಮೀಸಲಾತಿ ಹೋರಾಟಗಾರ ಎಂ.ವಿರೂಪಾಕ್ಷಿ ಒತ್ತಾಯಿಸಿದರು.
ಒಳ ಮೀಸಲಾತಿ ಕುರಿತು ಆಗಸ್ಟ್ ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿ 2 ತಿಂಗಳಾದರೂ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ 6ನೇ ಗ್ಯಾರಂಟಿಯಾಗಿ ಸದಾಶಿವ ಆಯೋಗ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ 5 ಗ್ಯಾರಂಟಿ ಮಾತ್ರ ಈಡೇರಿಸಿದ್ದಾರೆ. 6ನೇ ಗ್ಯಾರಂಟಿ ಈಡೇರಿಸದಿದ್ದರೆ ರಾಜ್ಯ ಮಟ್ಟದ ಹೋರಾಟ ಮಾಡಲಾಗುವುದು ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಎಚ್ಚರಿಸಿದರು.
70 ವರ್ಷ ಹೊಲೆಯ,ಮಾದಿಗ ಜಾತಿಗಳನ್ನು ಮತಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿ ಋಣ ತೀರಿಸದೇ ಸ್ಪಶ್ಯ ಜಾತಿಗಳ ಪರವಾದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಹೋರಾಟಗಾರ ಎಸ್.ಮಾರೆಪ್ಪ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ ವಿಳಂಭ ಧೋರಣೆ ಮಾಡುತ್ತಿದ್ದು ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಮುಖಂಡರಾದ ರವೀಂದ್ರ ಜಲ್ದಾರ್, ಜೆ.ಬಿ.ರಾಜು, ಹೇಮರಾಜ್ ಅಸ್ಕಿಹಾಳ, ಸುಭಾಶ್ ಅಸ್ಕಿಹಾಳ, ಭೀಮಣ್ಣ ಮಂಚಾಲ್, ತಿಮ್ಮಪ್ಪ ಪಿರಂಗಿ, ರವಿ, ಸತೀಶ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.