ADVERTISEMENT

ಮನೆಯಲ್ಲಿ ಹೇಳದೇ ಜಾತ್ರೆಗೆ ಹೋಗಿ ಆತಂಕ ಸೃಷ್ಟಿಸಿದ ಬಾಲಕಿಯರು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 16:27 IST
Last Updated 22 ಫೆಬ್ರುವರಿ 2024, 16:27 IST

ರಾಯಚೂರು/ ಲಿಂಗಸುಗೂರು: ಮನೆಯಲ್ಲಿ ಹೇಳದೇ ಜಾತ್ರೆಗೆ ಹೋಗಿ ಜಿಲ್ಲೆಯ ಜನರಲ್ಲೇ ಆತಂಕ ಸೃಷ್ಟಿಸಿದ ಲಿಂಗಸುಗೂರು ತಾಲ್ಲೂಕಿನ ನಾಲ್ವರು ಬಾಲಕಿಯರು ಪೊಲೀಸರ ನೆರವಿನಿಂದ ಗುರುವಾರ ಮನೆ ಸೇರಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಯರಗುಂಟಿ ಗ್ರಾಮದ ನಾಲ್ವರು ಬಾಲಕಿಯರು ತಿಂಥಣಿ ಮೌನೇಶ್ವರ ಜಾತ್ರೆಗೆ ಕರೆದುಕೊಂಡು ಹೋಗುವಂತೆ ಪಾಲಕರಿಗೆ ಮನವಿ ಮಾಡಿದ್ದರು. ಪಾಲಕರು ಯಾವ ಜಾತ್ರೆಯೂ ಬೇಡ ಸುಮ್ಮನೆ ಮನೆಯಲ್ಲಿ ಇರಬೇಕು ಎಂದು ತಾಕೀತು ಮಾಡಿದ್ದರು ಎನ್ನಲಾಗಿದೆ.

ನಂತರ ಹೇಗಾದರೂ ಮಾಡಿ ಜಾತ್ರೆಗೆ ಹೋಗಲೇ ಬೇಕೆಂದು ನಿರ್ಧಿರಿಸಿದ ಬಾಲಕಿಯರು ಹಾಲಭಾವಿಯಲ್ಲಿ ಶಾಲಾ ಕ್ರೀಡಾಕೂಟ ಇದೆ ಎಂದು ತಾಯಂದಿರಿಗೆ ಸುಳ್ಳು ಹೇಳಿ ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಿದ್ದರು. ಆಧಾರ್‌ ಕಾರ್ಡ್‌ ಹಾಗೂ ಬಟ್ಟೆ ತೆಗೆದುಕೊಂಡು ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಲಿಂಗಸುಗೂರಿನಿಂದ ತಿಂಥಣಿಯ ತೀರ್ಥಕ್ಷೇತ್ರ ಮೌನೇಶ್ವರ ಜಾತ್ರೆಗೆ ತೆರಳಿದ್ದರು

ADVERTISEMENT

ರಾತ್ರಿಯಾದರೂ ಬಾಲಕಿಯರು ಮನೆಗೆ ಬಾರದಿದ್ದಾಗ ಆತಂಕಗೊಂಡ ಪಾಲಕರು ಶಿಕ್ಷಕರನ್ನು ವಿಚಾರಿಸಿದ್ದಾರೆ. ಶಿಕ್ಷಕರು ಅಂತಹ ಯಾವ ಕ್ರೀಡಾಕೂಟ ನಡೆದಿಲ್ಲ. ನಾವು ಯಾರಿಗೂ ಹಾಲಭಾವಿಗೆ ಹೋಗಲು ಸೂಚಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಪಾಲಕರು ನೇರವಾಗಿ ಲಿಂಗಸುಗೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸ್‌ ವರಿಷ್ಠಾಧಿಕಾರಿ ಅವರ ಗಮನಕ್ಕೂ ತಂದಿದ್ದಾರೆ. ಪೊಲೀಸರು ತಾಲ್ಲೂಕಿನ ಸುತ್ತಮುತ್ತ ನಡೆಯುತ್ತಿದ್ದ ಜಾತ್ರೆಗಳಲ್ಲಿ ಶೋಧ ಕಾರ್ಯ ನಡೆಸಿದರು.

ಜಾತ್ರೆಗೆ ಕರೆದೊಯ್ಯುವಂತೆ ಕೋರಿದ್ದರಿಂದ ಸಂಶಯಗೊಂಡ ಪಾಲಕರು ತಿಂಥಣಿಗೆ ತೆರಳಿ ಹುಡುಕಾಡಿದ್ದಾರೆ. ಬಾಲಕಿಯರು ಜಾತ್ರೆಯಲ್ಲಿ ತಿರುಗಾಡಿ ಪ್ರಸಾದ ಸ್ವೀಕರಿಸಿ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆದು ರಾತ್ರಿ ಕಳೆದಿದ್ದಾರೆ. ದೇವಸ್ಥಾನದಲ್ಲಿ ಬಾಲಕಿಯರು ಪತ್ತೆಯಾದ ನಂತರ ಪಾಲಕರು ಪೊಲೀಸರಿಗೆ ಮಾಹಿತಿ ನೀಡಿ ಅವರ ನೆರವಿನೊಂದಿಗೆ ಊರಿಗೆ ಕರೆ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.