ADVERTISEMENT

‘ಅಪಾಯದಲ್ಲಿದೆ ದೇಶದ ಐಕ್ಯತೆ, ಸಂವಿಧಾನ’

ಬಿಜೆಪಿಯಿಂದ ಜಾತ್ಯತೀತ ಮೌಲ್ಯಗಳ ನಾಶ: ಸಿಪಿಐ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 15:32 IST
Last Updated 27 ಏಪ್ರಿಲ್ 2024, 15:32 IST
ಕೆ.ಪ್ರಕಾಶ
ಕೆ.ಪ್ರಕಾಶ   

ರಾಯಚೂರು: ಸಂವಿಧಾನದ ಆಧಾರ ಸ್ತಂಭಗಳಾದ ಜಾತ್ಯತೀತತೆ, ಸಾಮಾಜಿಕ ನ್ಯಾಯ, ಆರ್ಥಿಕ ಸಾರ್ವಭೌಮ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸಿ ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಈ ಬಾರಿ ಸೋಲಿಸಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ  ಕೆ.ಪ್ರಕಾಶ ತಿಳಿಸಿದರು.

ರೈತರ ಆದಾಯ ದ್ವಿಗುಣ, ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಕೇಂದ್ರದಲ್ಲಿ ಎರಡು ಬಾರಿ ಆಡಳಿತ ನಡೆಸಿದರೂ ರೈತರ ಅಭಿವೃದ್ಧಿ ಮಾಡಿಲ್ಲ. ಕೃಷಿ ಸಬ್ಸಿಡಿ ಕಡಿತ, ಕೃಷಿ ವೆಚ್ಚ ಹೆಚ್ಚು ಮಾಡಿದೆ. ಆದಾಯ ದ್ವಿಗುಣ ಮಾಡಿಲ್ಲ. ಜಾತ್ಯತೀತ ಪ್ರಜಾಪ್ರಭುತ್ವವನ್ನು ಪೂರ್ತಿ ನಾಶ ಮಾಡಿ ಸಂವಿಧಾನ ವಿರೋಧಿ ಆಡಳಿತ ನಡೆಸಿದೆ ಎಂದು ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.

ಧರ್ಮ ನಿರಪೇಕ್ಷ, ಜಾತ್ಯತೀತ ರಾಷ್ಟ್ರದಲ್ಲಿ ಪ್ರಧಾನಿ ಮೋದಿ ಅವರು ನೂತನ ಸಂಸತ್ತಿನಲ್ಲಿ ಸೆಂಗೋಲ್ ಪ್ರತಿಷ್ಠಾಪನೆ ಮಾಡಿ ರಾಜಪ್ರಭುತ್ವ ವ್ಯವಸ್ಥೆಯತ್ತ ಹೊರಟಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮಾಡಲು ಮುಂದಾಗಿ ದೇಶದ ಜನರಿಗೆ ಜಾತಿ, ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ಮುಂದಾಗಿದೆ ಎಂದು ಆರೋಪ ಮಾಡಿದರು.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಚಿಕ್ಕಬಳ್ಳಾಪುರ ಕ್ಷೇತ್ರ ಹೊರತುಪಡಿಸಿ ರಾಜ್ಯದ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿಸಲಾಗುತ್ತಿದೆ ಎಂದು ಹೇಳಿದರು. 

ಕೆ.ಜಿ.ವಿರೇಶ, ಶರಣಬಸವ ಹಾಗೂ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.