ಕವಿತಾಳ: ಸಮೀಪದ ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸೇನಪುರ ಗ್ರಾಮದಲ್ಲಿ ಕೊಳವೆಬಾವಿಯ ಮೋಟಾರು ಕೆಟ್ಟ ಪರಿಣಾಮ ಮೂರು ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ.
ಗ್ರಾಮಕ್ಕೆ ನೀರು ಪೂರೈಸುವ ಎರಡು ಕೊಳವೆಬಾವಿಗಳ ಪೈಕಿ ಒಂದರಲ್ಲಿ ಅಂತರ್ಜಲ ಕುಸಿತವಾಗಿದೆ. ಇನ್ನೊಂದು ಕೊಳವೆಬಾವಿಯ ಮೋಟಾರು ಕೆಟ್ಟಿದ್ದರಿಂದ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ನೀರಿಗಾಗಿ ಕೊಡ ಹಿಡಿದು ಹೊಲಗಳಿಗೆ ಅಲೆಯುವಂತಾಗಿದೆ.
ಗ್ರಾಮದ ಹನುಮಂತ ಪೂಜಾರಿ ಅವರು ತಮ್ಮ ಜಮೀನಲ್ಲಿನ ಕೊಳವೆಬಾವಿಯ ನೀರು ಹಿಡಿಯಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದು ಭಾನುವಾರ ಬೆಳಿಗ್ಗೆ ನೀರು ಹಿಡಿದುಕೊಳ್ಳಲು ಮಹಿಳೆಯರು ಮಕ್ಕಳು ಪರದಾಡುತ್ತಿರುವ ದೃಶ್ಯ ಕಂಡು ಬಂತು.
‘ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಗಿತವಾಗಿದೆ. ಸದ್ಯ ಕೊಳವೆಬಾವಿ ಕೆಟ್ಟಿದ್ದರಿಂದ ಬಳಕೆ ನೀರಿಗೂ ಸಮಸ್ಯೆ ಎದುರಾಗಿದೆ. ಮನೆ ಕೆಲಸ ಬಿಟ್ಟು ಬಿಸಿಲಿನಲ್ಲಿ ಸುತ್ತಮುತ್ತಲಿನ ಜಮೀನುಗಳಿಗೆ ಹೋಗಿ ನೀರು ತರುವಂತಾಗಿದೆ’ ಎಂದು ಬಸ್ಸಮ್ಮ, ಶಂಕ್ರಮ್ಮ, ಅಂಬಮ್ಮ, ದುರುಗಮ್ಮ ಮತ್ತು ಹನುಮಂತಿ ಆರೋಪಿಸಿದರು.
‘ವಿದ್ಯುತ್ ವ್ಯತಯದಿಂದ ಕೊಳವೆಬಾವಿ ಕೆಟ್ಟಿದೆ. ದುರಸ್ತಿ ಮಾಡಲಾಗುತ್ತಿದ್ದು ನೀರು ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂಜೀವರಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.