ADVERTISEMENT

19ರಂದು ಸಿಂಧನೂರು ಕೆರೆಗೆ ನೀರು: ಶಾಸಕ ಹಂಪನಗೌಡ ಬಾದರ್ಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:06 IST
Last Updated 16 ಜೂನ್ 2024, 16:06 IST
ಸಿಂಧನೂರಿನ ಸಾಣಾಪುರ ಮತ್ತು ಮಲ್ಲಾಪುರ ಬಳಿ ಇರುವ ಪವರ್ ಪ್ಲಾಂಟ್ ಹತ್ತಿರದ ಬಲ ಭಾಗದಲ್ಲಿ ಕುಸಿದಿದ್ದ ಕಲ್ಲಿನ ಗೋಡೆಯನ್ನು ನಿರ್ಮಿಸುತ್ತಿರುವ ಸ್ಥಳಕ್ಕೆ ಭಾನುವಾರ ಶಾಸಕ ಹಂಪನಗೌಡ ಬಾದರ್ಲಿ ಅವರು ಭೇಟಿ ನೀಡಿ ವೀಕ್ಷಿಸಿದರು
ಸಿಂಧನೂರಿನ ಸಾಣಾಪುರ ಮತ್ತು ಮಲ್ಲಾಪುರ ಬಳಿ ಇರುವ ಪವರ್ ಪ್ಲಾಂಟ್ ಹತ್ತಿರದ ಬಲ ಭಾಗದಲ್ಲಿ ಕುಸಿದಿದ್ದ ಕಲ್ಲಿನ ಗೋಡೆಯನ್ನು ನಿರ್ಮಿಸುತ್ತಿರುವ ಸ್ಥಳಕ್ಕೆ ಭಾನುವಾರ ಶಾಸಕ ಹಂಪನಗೌಡ ಬಾದರ್ಲಿ ಅವರು ಭೇಟಿ ನೀಡಿ ವೀಕ್ಷಿಸಿದರು   

ಸಿಂಧನೂರು: ‘ತುಂಗಭದ್ರಾ ಜಲಾಶಯದಿಂದ ಶನಿವಾರ ಎಡದಂಡೆ ನಾಲೆಗೆ ನೀರು ಹರಿಸಲಾಗಿದ್ದು, ಇದೇ 19ರಂದು ಸಿಂಧನೂರು ಕೆರೆಗೆ ನೀರು ಬರಲಿದೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.

ಭಾನುವಾರ ಎಡದಂಡೆ ನಾಲೆಗೆ ನೀರು ಬರುವುದನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಸಾಣಾಪುರ ಮತ್ತು ಮಲ್ಲಾಪುರ ಬಳಿ ಇರುವ ಪವರ್ ಪ್ಲಾಂಟ್ ಹತ್ತಿರದ ಕಾಲುವೆಯ ಬಲ ಭಾಗದಲ್ಲಿ ಕುಸಿದಿದ್ದ ಕಲ್ಲಿನ ಗೋಡೆಯನ್ನು ಕಟ್ಟಲಾಗುತ್ತಿದ್ದು, ಈಗಾಗಲೆ 15 ಅಡಿ ಎತ್ತರ ಕಟ್ಟಲಾಗಿದೆ. ಕಾಲುವೆಗೆ 1500 ಕ್ಯೂಸೆಕ್ಸ್ ನೀರು ಬರುತ್ತಿರುವುದರಿಂದ ಈ ಕಾಮಗಾರಿಯಿಂದ ನೀರು ಬರುವುದಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ’ ಎಂದರು.

‘ಎಡದಂಡೆ ನಾಲೆಗೆ ಈಗ ಬಿಟ್ಟಿರುವ ನೀರು ಹತ್ತು ದಿನ ಮಾತ್ರ ಇರುತ್ತದೆ. ಅಷ್ಟರೊಳಗೆ ಸಿಂಧನೂರು ನಗರದ ಕೆರೆ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ಕೆರೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಸೂಚಿಸಲಾಗಿದೆ’ ತಿಳಿಸಿದರು.

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಕೆರೆಗಳು ಬತ್ತಿರುವುದರಿಂದ ನೀರಿನ ತೊಂದರೆ ಬರದಂತೆ ಮುಂಜಾಗ್ರತೆ ವಹಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಕುಡಿಯುವ ನೀರಿನ ನಿರ್ವಹಣೆಗೆ ತೊಂದರೆಯಾಗದಂತೆ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲು ಅತ್ಯಂತ ಕಾಳಜಿ ವಹಿಸಬೇಕು’ ಎಂದು ಹಂಪನಗೌಡ ಬಾದರ್ಲಿ ಹೇಳಿದರು.

ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಮುಖಂಡ ಛತ್ರಪ್ಪ ಕುರುಕುಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.