ADVERTISEMENT

ಸಿಮೆಂಟ್ ಕಂಪೆನಿಯಲ್ಲಿ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:34 IST
Last Updated 10 ಜುಲೈ 2024, 16:34 IST
ಇಂದ್ರಕುಮಾರ
ಇಂದ್ರಕುಮಾರ   

ಸೇಡಂ: ತಾಲ್ಲೂಕಿನ ಕೋಡ್ಲಾ-ಬೆನಕನಳ್ಳಿ ಗ್ರಾಮದ ಶ್ರೀ ಸಿಮೆಂಟ್ ಕಂಪೆನಿಯಲ್ಲಿ ಕಾರ್ಮಿಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಬೆನಕನಹಳ್ಳಿ ಗ್ರಾಮದ ಇಂದ್ರಕುಮಾರ (32) ಮೃತಪಟ್ಟ ಕಾರ್ಮಿಕ. ಎಂದಿನಂತೆ ಕೆಲಸಕ್ಕೆ ತೆರಳಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುತ್ತಿದ್ದಾಗಲೇ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆನಕನಹಳ್ಳಿ ಗ್ರಾಮಸ್ಥರು ದೌಡಾಯಿಸಿದರು. ಕಂಪೆನಿ ಗೇಟ್ ಎದುರು ಜಮಾಯಿಸಿ, ಪರಿಹಾರಕ್ಕೆ ಒತ್ತಾಯಿಸಿದರು.

ADVERTISEMENT

ಎರಡು ತಿಂಗಳೊಳಗೆ ಮೂರು ಸಾವು: ಶ್ರೀ ಸಿಮೆಂಟ್ ಕಂಪೆನಿಯಲ್ಲಿ ಕಳೆದ ತಿಂಗಳವಷ್ಟೇ ಬಿಹಾರ ಮೂಲದ ಕಾರ್ಮಿಕ ಮತ್ತು ಸೇಡಂ ಪಟ್ಟಣದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಕಾರ್ಮಿಕ ಮೃತಪಟ್ಟಿದ್ದರಿಂದ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ. ಶ್ರೀ ಸಿಮೆಂಟ್ ಕಂಪೆನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಜೀವ ಭಯದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದರ ಕುರಿತು ಜಿಲ್ಲಾಡಳಿತ ಪರಿಶೀಲಿಸಬೇಕು. ಕಾರ್ಮಿಕರ ಭದ್ರತೆಗೆ ಮುಂದಾಗಬೇಕು ಎಂದು ಕೋಡ್ಲಾ ಮತ್ತು ಬೆನಕನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.