ಚನ್ನಪಟ್ಟಣ: ಈಚೆಗೆ ನಿಧನರಾದ ರಂಗ ನಿರ್ದೇಶಕರಾದ ದೊಡ್ಡಮಳೂರು ಸಿದ್ದರಾಜು ಹಾಗೂ ಎಸ್. ಅಶೋಕ್ ಪ್ರಭು ಅವರಿಗೆ ತಾಲ್ಲೂಕಿನ ರಂಗಭೂಮಿ ಕಲಾವಿದರು ಸೋಮವಾರ ನಗರದ ಗಾಂಧಿ ಭವನದ ಆವರಣದಲ್ಲಿ ಸಂತಾಪ ಸಭೆ ಏರ್ಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಡಾ. ರಾಜ್ ಕಲಾಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ್ ಮಾತನಾಡಿ, ರಂಗ ನಿರ್ದೇಶಕರಾದ ಸಿದ್ದರಾಜು ಮತ್ತು ಅಶೋಕ್ ಪ್ರಭು ಅವರ ಅಗಲಿಕೆ ತಾಲ್ಲೂಕಿನ ಕಲಾ ಶ್ರೀಮಂತಿಕೆಗೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದರು.
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು ಮಾತನಾಡಿ, ತಾಲ್ಲೂಕಿನಲ್ಲಿ ಕಲೆ, ನಾಟಕ, ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳ ಮೂಲಕ ಸಾಮಾಜಿಕ ಚಿಂತನೆ, ಜಾಗೃತಿ ಮೂಡಿಸುವ ಜೊತೆಗೆ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಕಲಾಕ್ಷೇತ್ರಕ್ಕೆ ಕೊಡುಗೆ ನೀಡುತ್ತಾ ಬಂದಿದ್ದ ಸಿದ್ದರಾಜು ಮತ್ತು ಅಶೋಕ್ ಪ್ರಭು ಅವರ ಅಗಲಿಕೆ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.
ರಂಗ ನಿರ್ದೇಶಕ ಕೆಂಪೇಗೌಡ, ಕಲಾವಿದ ಜೆಪಿ ಪ್ರಕಾಶ್, ಶಿಕ್ಷಕ ಹರೀಶ್, ಡಾ. ರಾಜ್ ಕಲಾ ಬಳಗದ ಪ್ರಧಾನ ಕಾರ್ಯದರ್ಶಿ ಗುರುಮಾದೇಯ್ಯ, ಖಜಾಂಚಿ ಮಹೇಶ್ ಕುಮಾರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕೆಂಗಲ್ ಸಾಂಸ್ಕೃತಿಕ ಕಲಾ ಟ್ರಸ್ ಅಧ್ಯಕ್ಷ ವಿಜಯೇಂದ್ರ, ಹಿರಿಯ ಕಲಾವಿದರಾದ ಎಂ.ಟಿ.ಆರ್. ತಿಮ್ಮರಾಜು, ನಾರಾಯಣಪ್ಪ, ಕಲಾವಿದರಾದ ಎಂ.ಎನ್.ರವಿಕುಮಾರ್, ಚಂದ್ರು, ತೇಜಸ್, ದಯಾನಂದ್, ಚಂದನ, ನಟರಾಜ್, ರಾಜಶೇಖರ್, ಲಿಂಗರಾಜು, ನರಸಿಂಹಯ್ಯ, ಚಂದ್ರಮೋಹನ್, ಸುರೇಶ್, ಯದುನಂದನ್, ಕೆಂಪೇಗೌಡ, ಕೂಡ್ಲೂರು ವೆಂಕಟೇಶ್, ಗಾಯಕರಾದ ಚೌ.ಪು ಸ್ವಾಮಿ, ಕೃಷ್ಣಪ್ಪ, ವೆಂಕಟಾಚಲಯ್ಯ, ಅರಸೇಗೌಡ, ವಿಜಯ್ ರಾಂಪುರ, ಇತರರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.