ಕನಕಪುರ: ಕೊಲೆ ಆರೋಪ ಹೊತ್ತಿರುವ ಚಿತ್ರನಟ ದರ್ಶನ್ ಅವರನ್ನು ಚಿತ್ರರಂಗ ನಿಷೇಧ ಮಾಡಬೇಕು. ಅವರಿಗೆ ತ್ವರಿತವಾಗಿ ನ್ಯಾಯಾಲಯ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶುಕ್ರವಾರ ಮನವಿ ಸಲ್ಲಿಸಿದರು.
ಇಲ್ಲಿನ ತಾಲ್ಲೂಕು ಕಚೇರಿ ಆಡಳಿತ ಸೌಧ ಮುಂಭಾಗದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನೂರಾರು ಸಂಖ್ಯೆಯಲ್ಲಿ ಸೇರಿ ದರ್ಶನ್ ಕೊಲೆ ಆರೋಪ ಕೃತ್ಯವನ್ನು ಖಂಡಿಸಿದರು. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕಿದ್ದ ನಟ, ಸಮಾಜಕ್ಕೆ ಕಳಂಕ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಅಭಿಮಾನಿಗಳು ಇವರನ್ನು ಆರಾಧಿಸುತ್ತಿದ್ದರು. ಆದರೆ, ಅಭಿಮಾನಕ್ಕೆ ಯೋಗ್ಯರಲ್ಲ. ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ಪದಾಧಿಕಾರಿಗಳಾದ ಚೀಲೂರು ಮುನಿರಾಜು, ನಲ್ಲಳ್ಳಿ ಶ್ರೀನಿವಾಸ್, ಪ್ರಶಾಂತ, ದಿನೇಶ್, ಚಿಕ್ಕರಂಗಯ್ಯ, ಗಬ್ಬಾಡಿ ಕಾಡೇಗೌಡ, ಪರಮೇಶ್, ಎಚ್.ವೆಂಕಟೇಶ್, ಕೆಂಡೇಗೌಡ, ಟಿ.ಎಂ.ರಾಮಯ್ಯ, ಎಂ.ನಾಗರಾಜು, ದಿಲೀಪ್, ಸ್ವಾಮಿಗೌಡ, ನಾಗರಾಜು ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.