ADVERTISEMENT

ಸಂಘಟಿತರಾಗಿ ಸೇವೆ ಮಾಡಲು ಸಲಹೆ

ವಿಪ್ರ ಯುವ ಸೇವಾ ಟ್ರಸ್ಟ್‌ನಿಂದ ಹನುಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 14:44 IST
Last Updated 2 ಜನವರಿ 2024, 14:44 IST
ರಾಮನಗರದಲ್ಲಿ ವಿಪ್ರ ಯುವ ಸೇವಾ ಟ್ರಸ್ಟ್ ವತಿಯಿಂದ ನಡೆದ ಹನುಮ ಜಯಂತಿ ಆಚರಣೆ ಅಂಗವಾಗಿ, ನಗರದ ಪ್ರಮುಖ ಬೀದಿಗಳಲ್ಲಿ ದೇವರ ಮೂರ್ತಿಯ ಮೆರವಣಿಗೆ ಜರುಗಿತು
ರಾಮನಗರದಲ್ಲಿ ವಿಪ್ರ ಯುವ ಸೇವಾ ಟ್ರಸ್ಟ್ ವತಿಯಿಂದ ನಡೆದ ಹನುಮ ಜಯಂತಿ ಆಚರಣೆ ಅಂಗವಾಗಿ, ನಗರದ ಪ್ರಮುಖ ಬೀದಿಗಳಲ್ಲಿ ದೇವರ ಮೂರ್ತಿಯ ಮೆರವಣಿಗೆ ಜರುಗಿತು   

ರಾಮನಗರ: ‘ವಿಪ್ರ ಸಮುದಾಯದವರು ಸಂಘಟಿತರಾಗಿ ವಿವಿಧ ದೇವರುಗಳ ಸೇವಾ ಕಾರ್ಯಗಳನ್ನು ಮಾಡಬೇಕು. ಒಗ್ಗಟ್ಟಾಗಿ ಎಲ್ಲರೂ ಸೇರಿ ಮಾಡುವ ಇಂತಹ ಸೇವೆಯಿಂದ ಸಮುದಾಯಕ್ಕೆ ಒಳ್ಳೆಯದಾಗುತ್ತದೆ’ ಎಂದು ತಾಲ್ಲೂಕು ವಿಪ್ರ ಯುವ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ ಅಯ್ಯರ್ ಹೇಳಿದರು.

ನಗರದಲ್ಲಿ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹನುಮ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ‘ಬೇರೆಯವರಿಗೆ ಹೋಲಿಸಿದರೆ ನಮ್ಮ ಜನಾಂಗಕ್ಕೆ ಯಾವುದೇ ರೀತಿಯ ಸೌಲಭ್ಯಗಳು ಸರ್ಕಾರದಿಂದ ಸಿಗುವುದಿಲ್ಲ. ವಿದ್ಯೆಗೆ ಅನುಸಾರವಾಗಿ ನಾವು ಹುದ್ದೆಗಳನ್ನು ಪಡೆಯುತ್ತಿದ್ದೇವೆ. ದೇಶಕ್ಕೆ ಬ್ರಾಹ್ಮಣರ ಕೊಡುಗೆ ಅಪಾರವಾದುದು. ವಿಪ್ರರ ಬೆಸೆಯುವ ಟ್ರಸ್ಟ್‌ 18 ವರ್ಷಗಳಿಂದ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ’ ಎಂದರು.

ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಆರ್‌.ಜಿ. ಚಂದ್ರಶೇಖರ್ ಮಾತನಾಡಿ, ‘ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ಈಗ ನನಸಾಗಿದೆ. ಇನ್ನೂ 22 ದಿನಗಳ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿರುವುದು ಹೆಮ್ಮೆಯ ವಿಚಾರ’ ಎಂದು ಹೇಳಿದರು.

ADVERTISEMENT

ಗಮನ ಸೆಳೆದ ಮೆರವಣಿಗೆ: ಟ್ರಸ್ಟ್‌ನ 18ನೇ ವಾರ್ಷಿಕೋತ್ಸವ ಹಾಗೂ 11ನೇ ವರ್ಷದ ಹನುಮ ಜಯಂತಿ ಅಂಗವಾಗಿ ಪಟ್ಟಣದ ಎಂ.ಜಿ. ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಹನುಮ ಮೂರ್ತಿಯ ವರ್ಣರಂಜಿತ ಮೆರವಣಿಗೆಯು ಮಂಗಳವಾದ್ಯದೊಂದಿಗೆ ನಡೆಯಿತು. ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿದ ಮೆರವಣಿಗೆ ಶ್ ರಾಮ ದೇವಾಲಯದ ಬಳಿ ಅಂತ್ಯವಾಯಿತು.

ಶ್ರೀರಾಮ ಮಂದಿರದಲ್ಲಿ ಮಹಿಳಾ ಮಂಡಳಿ ಸದಸ್ಯರು ಭಜನೆ, ಭಕ್ತಿಗೀತೆಗಳನ್ನು ಹಾಡಿದರು. ಜಯಂತಿ ಪ್ರಯುಕ್ತ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ರಾಮ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿತು. ಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ನೂತನ ಅಧ್ಯಕ್ಷರಾಗಿ ಕೇಶವ

ರಾಮನಗರ ತಾಲ್ಲೂಕು ವಿಪ್ರ ಯುವ ಸೇವಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಟಿ. ಕೇಶವ ವೈದ್ಯ ಕಾರ್ಯದರ್ಶಿಯಾಗಿ ಬಿ.ಆರ್. ಉಮೇಶ್ ಶಾಸ್ತ್ರಿ ಖಜಾಂಚಿಯಾಗಿ ಟಿ.ಆರ್. ವಿಜಯಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಪಿ.ವೈ. ರವೀಂದ್ರ ಹೇರ್ಳೆ ನಡೆಸಿಕೊಟ್ಟರು. ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ರಾಮಗೋಪಾಲ್ ಕಾರ್ಯದರ್ಶಿ ಶಾಂತಬಾಯಿ ಶ್ರೀ ಶಂಕರ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಶೇಷಾದ್ರಿ ಅಯ್ಯರ್ ಚಂದ್ರಶೇಖರ್ ಭಟ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.