ಮಾವಿನ ತೋಟಕ್ಕೆ ಕೃಷಿ ಅಧಿಕಾರಿಗಳ ಭೇಟಿ, ಪರಿಶೀಲನೆ
ಪ್ರಜಾವಾಣಿ ವಾರ್ತೆ Published 8 ಮೇ 2024, 4:56 IST Last Updated 8 ಮೇ 2024, 4:56 IST ಕನಕಪುರ ಸಾತನೂರು ಹೋಬಳಿಯ ಮಾವಿನ ತೋಟಕ್ಕೆ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕನಕಪುರ: ಮಳೆ ಕೊರತೆಯಿಂದ ಮಾವಿನ ಮರಗಳು ಒಣಗಿ, ಫಸಲು ಉದುರಿ ನಷ್ಟಕ್ಕಿಡಾಗಿರುವ ತೋಟಗಳಿಗೆ ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಸಾತನೂರು ಹೋಬಳಿಯ ಸುತ್ತಮುತ್ತಲ ಮಾವಿನ ತೋಟಗಳಿಗೆ ಕೆವಿಕೆ ಹಿರಿಯ ವಿಜ್ಞಾನಿ ಪೂಜಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಶ್ರೀನಿವಾಸ, ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರಸನ್ನ, ಜಿಲ್ಲಾ ಮಾವು ಕಂಪನಿಯ ನಿರ್ದೇಶಕ ಅಶ್ವತ್ಥ್ ನಾರಾಯಣ್, ಆತ್ಮ ಯೋಜನೆ ಪ್ರಕಾಶ್, ಪ್ರಗತಿ ಪರ ರೈತರು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಜಿಲ್ಲಾ ಮಾವು ಕಂಪನಿ ನಿರ್ದೇಶಕ ಅಶ್ವತ್ಥ್ ನಾರಾಯಣ್ ಮಾತನಾಡಿ ಈ ಬಾರಿ ಮಳೆ ಕೊರತೆ ಹಾಗೂ ಅತಿಯಾದ ತಾಪಮಾನದಿಂದ ಮಾವಿನ ಫಸಲು ಸಂಪೂರ್ಣ ನಾಶವಾಗಿದೆ, ಅಲ್ಪ ಪ್ರಮಾಣದಲ್ಲಿ ಬಿಟ್ಟಿದ್ದ ಮಾವು ಬಿಸಿಲಿನ ಝಳಕ್ಕೆ ಉದುರಿ ಹೋಗಿವೆ, ಈ ಬಾರಿ ರೈತರಿಗೆ ಪೂರ್ಣ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ವಿವರಿಸಿದರು.
ಅತಿಯಾದ ಬಿಸಿಲಿನ ತಾಪದಿಂದ ಮಾವಿನ ಮರಗಳೇ ಒಣಗಲಾರಂಭಿಸಿವೆ, ಸರ್ಕಾರವು ಈ ಬಾರಿ ಮಾವು ಬೆಳೆಗಾರರಿಗೆ ಹೆಚ್ಚಿನ ಪರಿಹಾರವನ್ನು ನೀಡಬೇಕು, ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಬರಬೇಕೆಂದು ಮನವಿ ಮಾಡಿದರು.
ಕೆವಿಕೆ ಹಿರಿಯ ವಿಜ್ಞಾನಿ ಪೂಜಾ ರೈತರು ಹಾಗೂ ಮಾವು ಬೆಳೆಗಾರರು ಮಾಡಿದ ಮನವಿಯನ್ನು ಸ್ವೀಕರಿಸಿದರು. ಜಿಲ್ಲಾಡಳಿತಕ್ಕೆ ವರದಿಯನ್ನು ಸಲ್ಲಿಸಿ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.
ರೈತ ಮುಖಂಡರಾದ ಸಾಗರ್, ರಾಕೇಶ್, ಕೃಷ್ಣೇಗೌಡ, ಅರುಣ್ ಕುಮಾರ್, ಶಿವಕುಮಾರ್ ಉಪಸ್ಥಿತರಿದ್ದರು.