ಚನ್ನಪಟ್ಟಣ: ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ದಣ್ಣಮ್ಮ ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನಡೆಯಿತು.
ಗೋಧೂಳಿ ಲಗ್ನದಲ್ಲಿ ಮಹಾಗಣಪತಿ ಪೂಜೆ ಹಾಗೂ ಸುಮಂಗಲಿಯರ ಗಂಗೆ ಪೂಜೆ, ಗೋಪೂಜೆಯಲ್ಲಿ ದಣ್ಣಮ್ಮ ಪಂಚಲೋಹದ ವಿಗ್ರಹ ಜೊತೆ ಆಲಯ ಪ್ರವೇಶ, ಮಹಾಪೂಜೆಯನ್ನು ನಡೆಸಲಾಯಿತು.
ನಂತರ ದೇವಿಗೆ ಸಂಪೂರ್ಣ ಸೇವೆ, ಫಲಪಂಚಾಮೃತ ಅಭಿಷೇಕ ಹಾಗೂ ಬೆಳಗಿನ ಶುಭಗಳಿಗೆಯಲ್ಲಿ ದೇವಾಲಯದ ವಿಮಾನಗೋಪುರ ಕಳಸ ಸ್ಥಾಪನೆ ಹಾಗೂ ಗಣಪತಿ ಹೋಮ, ದಣ್ಣಮ್ಮನಿಗೆ ಶಕ್ತಿ ಹೋಮ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ದೇವತಾ ಕಾರ್ಯದ ಪ್ರಯುಕ್ತ ಕಾರ್ಕಳ್ಳಿ ಬಸವಪ್ಪನನ್ನು ಕರೆಸಲಾಗಿತ್ತು.
ದೇವತಾ ಕಾರ್ಯದ ಅಂಗವಾಗಿ ಭಾನುವಾರ ರಾತ್ರಿ ಸುಳ್ಳೇರಿ ಪಟ್ಟಲದಮ್ಮ, ಬಾಣಗಹಳ್ಳಿ ಲಕ್ಷ್ಮೀದೇವಿ, ಕೂಳಗೆರೆ ಬನ್ನೂರು ಹೇಮಾದ್ರಮ್ಮ ಮುಂತಾದ ದೇವತೆಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ತಮಟೆ, ನಗಾರಿ, ವೀರಗಾಸೆ, ಸಾಂಸ್ಕೃತಿಕ ಹಾಗೂ ಜಾನಪದ ಕಲಾತಂಡಗಳ ಮೆರವಣಿಗೆ ಮೆರಗು ತಂದಿತು. ಜೊತೆಗೆ ಮದ್ದು, ಗುಂಡು, ಬಾಣಬಿರುಸುಗಳನ್ನು ಸಿಡಿಸಲಾಯಿತು.
ಅಕ್ಕೂರು ಗ್ರಾಮದ ಅಭಿಷೇಕ್ ಶಾಸ್ತ್ರಿ ದೇವಾಲಯದಲ್ಲಿ ಯಜ್ಞಯಗಾದಿಗಳನ್ನು ನೇರವೇರಿಸಿದರು. ಪ್ರಧಾನ ಅರ್ಚಕ ಅನಂತಕುಮಾರ್ ಪೂಜೆ ಕೈಂಕರ್ಯ ನೆರವೇರಿಸಿದರು. ನಂತರ ದೇವಾಲಯ ಉದ್ಘಾಟನೆ ನಡೆಯಿತು. ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.