ಚನ್ನಪಟ್ಟಣ: ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯ ಇರುವವರಿಗೆ ಸಹಾಯ ಮಾಡಬೇಕು ಎಂದು ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಸಭಾಪತಿ ಡಾ.ವಿ.ಎಲ್.ಎಸ್.ಕುಮಾರ್ ಕಿವಿಮಾತು ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಬಡಾವಣೆ ಗಣೇಶ ದೇವಸ್ಥಾನದ ಬಳಿ ಬುಧವಾರ ಆಯೋಜಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನಪಟ್ಟಣ ತಾಲ್ಲೂಕು ಶಾಖೆ ನೂತನ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ರಕ್ತದಾನ ಮಾಡಿದರೆ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ತಪ್ಪು ಕಲ್ಪನೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಮಾನವ ಜೀವನ ಹಾಗೂ ಆರೋಗ್ಯ ರಕ್ಷಿಸಲು ಹುಟ್ಟಿರುವ ಸ್ವಯಂಪ್ರೇರಿತ ಮಾನವೀಯ ಸಂಸ್ಥೆಯಾಗಿದೆ. ದೇಶಾದ್ಯಂತ 1200ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಅಪಘಾತ, ವಿಪತ್ತು, ತುರ್ತು ಪರಿಸ್ಥಿತಿ, ಅತಿವೃಷ್ಟಿ, ಅನಾವೃಷ್ಟಿ, ಯುದ್ಧದಂತಹ ಭೀಕರ ಪರಿಸ್ಥಿತಿಯಲ್ಲಿ ಯಾವುದೇ ದೇಶ ಹಾಗೂ ಜಾತಿಧರ್ಮಕ್ಕೆ ಸೀಮಿತವಾಗದೆ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಸೇವಾ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಸಂಸ್ಥೆ ರಾಮನಗರ ಜಿಲ್ಲಾ ಘಟಕದ ಸಭಾಪತಿ ವಿ.ಶೇಷಾದ್ರಿ ಅಯ್ಯರ್ ಮಾತನಾಡಿ, ಚನ್ನಪಟ್ಟಣ ತಾಲ್ಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮವಾದ ಕಾರ್ಯ ಮಾಡಲಿ ಎಂದು ಆಶಿಸಿದರು.
ನೂತನ ಪದಾಧಿಕಾರಿಗಳಾದ ರಾಮನಗರ ಜಿಲ್ಲಾ ಶಾಖೆ ಉಪಸಭಾಪತಿ ವಿ.ಬಾಲಕೃಷ್ಣ, ಚನ್ನಪಟ್ಟಣ ತಾಲ್ಲೂಕು ಶಾಖೆ ಸಭಾಪತಿ ರಮೇಶ್, ಉಪಸಭಾಪತಿ ಎನ್.ಮಧುಸೂದನ್, ವಿನಯ್ ಹಾಗೂ ಖಜಾಂಚಿ ರಮೇಶ್ ಪ್ರಮಾಣವಚನ ಸ್ವೀಕರಿಸಿದರು.
ರಾಮನಗರ ಜಿಲ್ಲಾ ಶಾಖೆ ಖಜಾಂಚಿ ಎಂ.ಪರಮಶಿವಯ್ಯ, ಕಾರ್ಯದರ್ಶಿ ಎಸ್.ರುದ್ರೇಶ್ವರ್, ಸಹಕಾರ್ಯದರ್ಶಿ ಕೆ.ಎಚ್.ಚಂದ್ರಶೇಖರಯ್ಯ, ಸದಸ್ಯರಾದ ಕೆ.ಎಸ್.ಶಂಕರಯ್ಯ, ಮಹೇಂದ್ರಕುಮಾರ್, ಶಿವಕುಮಾರ್, ತಾಲ್ಲೂಕು ಶಾಖೆ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.