ಬಿಡದಿ: ಬಾಲಗಂಗಾಧರನಾಥ ಸ್ವಾಮೀಜಿ ಜನ್ಮಸ್ಥಳ ಬಾನಂದೂರಿನಿಂದ ಆದಿಚುಂಚನಗಿರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಶುಕ್ರವಾರ ಬಸ್ ಟಿಕೆಟ್ ₹127 ಚೀಟಿ ಪಡೆಯುವ ಮೂಲಕ ಚಾಲನೆ ನೀಡಿದರು.
ಶುಕ್ರವಾರ ಬಾನಂದೂರು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಅನ್ನದಾನೇಶ್ವರನಾಥ ಸ್ವಾಮೀಜಿ ಮೊದಲ ಟಿಕೆಟ್ ಪಡೆದು ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅವರು, ಚುಂಚನಗಿರಿಗೆ ನೇರ ಬಸ್ ಸಂಚಾರ ಆರಂಭಿಸುವ ಮೂಲಕ ಸಾರಿಗೆ ಸಂಸ್ಥೆ ಈ ಭಾಗದ ಜನರ ಬಹುದಿನದ ಕನಸು ನನಸು ಮಾಡಿದೆ ಎಂದು ಶ್ಲಾಘಿಸಿದರು.
ಈ ಭಾಗದ ಜನರು ಬೆಂಗಳೂರು ಅಥವಾ ಮಂಡ್ಯ ಮತ್ತಿತರ ಸ್ಥಳಗಳಿಂದ ಸುತ್ತಾಡಿ ಚುಂಚನಗಿರಿಗೆ ತೆರಳಬೇಕಾಗಿತ್ತು. ಆದರೆ, ಈ ಗ್ರಾಮದ ಗಂಗಾಧರಯ್ಯ ಅವರ ಪರಿಶ್ರಮದಿಂದ ನೇರ ಬಸ್ ಸೌಲಭ್ಯ ಸಿಕ್ಕಿದೆ. ಈ ಬಸ್ ಮರಳವಾಡಿಯಿಂದ ಬೆಳಗ್ಗೆ 8ಕ್ಕೆ ಹೊರಟು ಹಾರೋಹಳ್ಳಿ, ಬಿಡದಿ, ರಾಮನಗರ, ಮಂಡ್ಯ, ನಾಗಮಂಗಲ ಮುಖಂತರ ಕ್ಷೇತ್ರ ತಲುಪಲಿದೆ. ಈ ಬಸ್ ಶಾಶ್ವತವಾಗಿ ಉಳಿಯಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಬಾನಂದೂರು ಗ್ರಾಮದಲ್ಲಿ ಜನಿಸಿದ ಬಾಲಗಂಗಾಧರನಾಥ ಸ್ವಾಮೀಜಿ ಈ ಜಗತ್ತು ಕಂಡ ಮಹಾ ಪುರುಷ. ಅವರ ಹುಟ್ಟೂರಿನಿಂದ ಆದಿಚುಂಚನಗಿರಿ ಕ್ಷೇತ್ರಕ್ಕೆ ನೇರ ಬಸ್ ಸೌಲಭ್ಯ ಈ ಭಾಗದ ಜನರಿಗೆ ಅನುಕೂಲವಾಗಿದೆ. ಈ ಭಾಗದ ಬಹುದಿನದ ಸಮಸ್ಯೆ ಇದೀಗ ಬಗೆಹರಿದಿದೆ ಎಂದರು.
ಕೆ.ಎಸ್.ಆರ್.ಟಿ.ಸಿ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸಮೂರ್ತಿ, ಬಸ್ ಚಾಲಕ ನಿರ್ವಾಹಕ ವೆಂಕಟೇಶ್ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಉಮೇಶ್, ಬಿಜಿಎಸ್ ಪ್ರಗತಿಪರ ವೇದಿಕೆ ಪದಾಧಿಕಾರಿಗಳಾದ ಗಂಗಾಧರಯ್ಯ, ಬಿ.ಎಂ.ಕುಮಾರ್, ನಂಜುಂಡಿ ಬಾನಂದೂರು, ರೇಣುಕಯ್ಯ, ಕೇಶವಮೂರ್ತಿ, ಭಾನುಪ್ರಕಾಶ್, ಶಿವಣ್ಣ, ಸಂತೋಷ್, ಗಂಗಾಧರ್, ಕುಮಾರ್, ಜಯಕುಮಾರ್, ಬಿ.ಕೆ.ವಿಠಲ್, ಜಾನಪದ ಗಾಯಕಿ ಬೋರಮ್ಮ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.