ADVERTISEMENT

ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 7:17 IST
Last Updated 5 ಡಿಸೆಂಬರ್ 2023, 7:17 IST
ಕನಕಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸರಗಳ್ಳತನದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣ ಲಮಾಣಿ, ಎಸ್‌ಐ ಗಳಾದ ಮನೋಹರ್‌, ರುದ್ರಪ್ಪ
ಕನಕಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸರಗಳ್ಳತನದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣ ಲಮಾಣಿ, ಎಸ್‌ಐ ಗಳಾದ ಮನೋಹರ್‌, ರುದ್ರಪ್ಪ   

ಕನಕಪುರ: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿ ಜವನಮ್ಮನದೊಡ್ಡಿ ಗ್ರಾಮದಲ್ಲಿ 13 ದಿನಗಳ ಹಿಂದೆ ಪದ್ಮಮ್ಮ ಅವರ 50 ಗ್ರಾಂ ತೂಕದ ಮಾಂಗಲ್ಯ ಸರವನ್ನುಆರೋಪಿಗಳು ಕಿತ್ತುಕೊಂಡು ಪರಾರಿಯಾಗಿದ್ದರು.

ವಿರೂಪಸಂದ್ರ ಗ್ರಾಮದ ಧನಂಜಯ ಅಲಿಯಾಸ್ ಮಂಜ (25) ಮೊದಲ ಆರೋಪಿಯಾಗಿದ್ದು ಈತನೇ ಕಳ್ಳತನದ ಪ್ರಮುಖ ರೂವಾರಿಯಾಗಿದ್ದಾನೆ. ಈತನ ಸಹಕಾರದಿಂದ ಲಕ್ಷ್ಮೀಪುರ ಗ್ರಾಮದ ಬಸವ (35), ತನ್ನ ಸ್ನೇಹಿತರಾದ ಮೈಸೂರಿನ ನಾಡನಹಳ್ಳಿ ಮನೋಜ (24), ಎರಗನಹಳ್ಳಿ ಪ್ರದೀಪ್ (24) ಸರಗಳ್ಳತನ ಮಾಡಿದ್ದು, ಇವರನ್ನು ಬಂಧಿಸಲಾಗಿದೆ. 

ಹಣದ ಸಮಸ್ಯೆ ಇದ್ದ ಲಕ್ಷ್ಮೀಪುರದ ಬಸವ, ಧನಂಜಯನ ಬಳಿ ಸಹಾಯ ಕೋರಿದ್ದ. ಜವನಮ್ಮದೊಡ್ಡಿ ಬಳಿ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದ ಧನಂಜಯ ಪಕ್ಕದ ಜಮೀನಿನಲ್ಲಿ ಒಂಟಿ ಮಹಿಳೆಯೊಬ್ಬರು ದನ ಮೇಯಿಸುತ್ತಾರೆ. ಆಕೆಯ ಕತ್ತಿನ ಮಾಂಗಲ್ಯ ಸರ ಸರಗಳ್ಳತನ ಮಾಡಲು ಸಲಹೆ ನೀಡಿದ್ದ ಎನ್ನಲಾಗಿದೆ. 

ಕಳ್ಳತನಕ್ಕೆ ಮೈಸೂರಿನ ಪ್ರದೀಪ ಮತ್ತು ಮನೋಜ್‌ನ ಸಹಾಯ ಪಡೆದಿದ್ದ ಬಸವ, ಅವರೊಂದಿಗೆ ಸೇರಿ ಬೈಕ್‌ನಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದು ಪದ್ಮಮ್ಮ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು. 

ಎಸ್‌ಐ ಮನೋಹರ್ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸೋಮವಾರ ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣ ಲಮಾಣಿ, ಎಸ್‌ಐ ಮನೋಹರ್, ಅಪರಾಧ ವಿಭಾಗದ ಎಸ್‌ಐ ರುದ್ರಪ್ಪ, ಮೋಹನ್, ಪ್ರದೀಪ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.