ADVERTISEMENT

ಚನ್ನಪಟ್ಟಣ: ನೀತಿ ಸಂಹಿತೆ ಬಗ್ಗೆ ಕುಮಾರಸ್ವಾಮಿಗೆ ಸಾಮಾನ್ಯಜ್ಞಾನ ಇಲ್ಲವೇ? DKS

ಚನ್ನಪಟ್ಟಣ: ನೀತಿ ಸಂಹಿತೆ ಉಲ್ಲಂಘನೆ ನೋಟಿಸ್ ಹಿಂದೆ ಕಾಂಗ್ರೆಸ್ ಕೈವಾಡ ಆರೋಪಕ್ಕೆ ಡಿ.ಕೆ. ಸುರೇಶ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 9:54 IST
Last Updated 26 ಅಕ್ಟೋಬರ್ 2024, 9:54 IST
<div class="paragraphs"><p>ನಿಖಿಲ್ ಕುಮಾರಸ್ವಾಮಿ, ಡಿ.ಕೆ. ಸುರೇಶ್</p></div>

ನಿಖಿಲ್ ಕುಮಾರಸ್ವಾಮಿ, ಡಿ.ಕೆ. ಸುರೇಶ್

   

ಚನ್ನಪಟ್ಟಣ (ರಾಮನಗರ): ಉಪ ಚುನಾವಣೆಯ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಡೆದ ರೋಡ್‌ ಷೋ ಕಾರ್ಯಕ್ರಮದಲ್ಲಿ, ನೀತಿ ಸಂಹಿತೆ ಉಲ್ಲಂಘನೆ ಕುರಿತು ಆಯೋಜಕರಿಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿರುವುದು ಜೆಡಿಎಸ್‌ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ನೋಟಿಸ್‌ ಕುರಿತು ಬೆಂಗಳೂರಿನಲ್ಲಿ ಜೆಡಿಎಸ್‌ನ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, ‘ಕಾಂಗ್ರೆಸ್ ಸರ್ಕಾರದಿಂದ ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ’ ಎಂದು ಟೀಕಿಸಿರುವುದಕ್ಕೆ, ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.

ADVERTISEMENT

ತಾಲ್ಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಶನಿವಾರ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಬಸ್ಸುಗಳಲ್ಲಿ ಜನರನ್ನು ಕರೆದುಕೊಂಡು ಬರಲು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದು, ಲೆಕ್ಕ ಕೊಡಬೇಕು ಎಂಬ ಸಾಮಾನ್ಯ ಜ್ಞಾನ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಇಲ್ಲವೆ? ಅಷ್ಟೂ ಗೊತ್ತಿಲ್ಲದೆ ಹೇಗೆ ಕೇಂದ್ರ ಸಚಿವರಾದರು? ಗೊಲ್ಲದಿದ್ದರೆ ಪ್ರಧಾನಿ ಮೋದಿಯನ್ನು ಕೇಳಿ ತಿಳಿದುಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ಕುಮಾರಸ್ವಾಮಿ ಹಲವು ಚುನಾವಣೆಗಳನ್ನು ಮಾಡಿದ್ದಾರೆ. ನೀತಿ ಸಂಹಿತೆ ಹಾಗೂ ಯಾರ ಪಾತ್ರ ಏನೇನು ಎಂಬುದರ ಅರಿವಿದೆ. ಉಲ್ಲಂಘನೆ ಆಗಿದ್ದರೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಅವರ ಕರ್ತವ್ಯ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಆದರೆ, ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ದಿನಾ ಬೆಳಿಗ್ಗೆ ದೂಷಿಸುತ್ತಾರೆ’ ಎಂದು ಕಿಡಿಕಾರಿದರು.

ಅವರೇ ಹೊರ ಹಾಕಿದರು: ‘ಯೋಗೇಶ್ವರ್ 9 ಚುನಾವಣೆ ಎದುರಿಸಿ, 5 ಸಲ ಶಾಸಕರಾಗಿ 2 ಸಲ ಸಚಿವರಾಗಿದ್ದವರು. ಕುಮಾರಸ್ವಾಮಿ ತಮ್ಮ ಪುತ್ರನನ್ನು ಉಪ ಚುನಾವಣೆಗೆ ನಿಲ್ಲಿಸುವುದಕ್ಕಾಗಿ, ಬಿಜೆಪಿ ಜೊತೆಗೂಡಿ ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಹೊರಹಾಕಿದರು. ನಾವೇನೂ ಷಡ್ಯಂತ್ರ ಮಾಡಿಲ್ಲ. ಮಾಡುತ್ತಿರುವುದು ಅವರೇ. ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಹೋಗಿದ್ದು ಷಡ್ಯಂತ್ರವೇ?’ ಎಂದು ಪ್ರಶ್ನಿಸಿದರು.

‘ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಯಾವುದೇ ಅಸಮಾಧಾನವಿಲ್ಲ. ಇಲ್ಲಿ ಮುಂಚಿನಿಂದಲೂ ನಾನೇ ಅಭ್ಯರ್ಥಿ ಎಂದು ಡಿ.ಕೆ. ಶಿವಕುಮಾರ್ ಹೇಳಿಕೊಂಡು ಬಂದಿದ್ದಾರೆ. ಈಗ ಅಭ್ಯರ್ಥಿಯಾಗಿರುವ ಯೋಗೇಶ್ವರ್ ಜೊತೆಗೆ ಶಿವಕುಮಾರ್ ಮುಖ ನೋಡಿ ಜನ ಮತ ಹಾಕಲಿದ್ದಾರೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ನಿಮ್ಮ ಉಸ್ತುವಾರಿಯಲ್ಲಿ ಚುನಾವಣೆ ನಡೆಯುತ್ತಿದೆಯೇ’ ಎಂಬ ಪ್ರಶ್ನೆಗೆ, ‘ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಚುನಾವಣೆ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.