ರಾಮನಗರ: ಜೆಡಿಎಸ್ ಹಿಡಿತದಲ್ಲಿದ್ದ ಚನ್ನಪಟ್ಟಣ ನಗರಸಭೆಯನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಹೂಡಿದ್ದ ತಂತ್ರ ಫಲಿಸಿದೆ. ಲೋಕಸಭೆ ಚುನಾವಣೆಗೆ ಮುಂಚೆ ಜೆಡಿಎಸ್ ತೊರೆದು ‘ಕೈ’ ಹಿಡಿದಿದ್ದ 9 ಸದಸ್ಯರ ಜೊತೆಗೆ, ಇನ್ನೂ ನಾಲ್ವರು ದಳವನ್ನು ತೊರೆದಿದ್ದಾರೆ. ಅದರೊಂದಿಗೆ 13 ಸದಸ್ಯರನ್ನು ತನ್ನತ್ತ ಸೆಳೆದಿರುವ ಕಾಂಗ್ರೆಸ್, ತನ್ನ ಬಲವನ್ನು 20ಕ್ಕೆ ಏರಿಸಿಕೊಂಡಿದೆ.
31 ಸದಸ್ಯರ ಬಲದ ನಗರಸಭೆಯಲ್ಲಿ ಜೆಡಿಎಸ್ನ 16, ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ 7 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಇದೀಗ ಜೆಡಿಎಸ್ನ ಒಟ್ಟು ಬಲದ ಪೈಕಿ 2/3ರಷ್ಟು ಅಂದರೆ, 13 ಮಂದಿ ಪಕ್ಷ ತೊರೆದಿದ್ದಾರೆ. ಅವರೊಂದಿಗೆ ಪಕ್ಷೇತರ ಸದಸ್ಯೆ ಉಮಾ ಅವರನ್ನು ಸಹ ಕಾಂಗ್ರೆಸ್ನಲ್ಲಿ ವಿಲೀನ ಮಾಡಿ, ಪಕ್ಷದ ಸದಸ್ಯರು ಎಂದು ಪರಿಗಣಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಕೋರಿದ್ದರು.
ಅದರಂತೆ, ಕರ್ನಾಟಕ ಸ್ಥಳೀಯ ಸಂಸ್ಥೆಗಳು (ಪಕ್ಷಾಂತರ ನಿಷೇಧ) ಅಧಿನಿಯಮ–1987ರ ಕಲಂ 3(ಬಿ)(2ಎ) ಅಡಿ, ಜೆಡಿಎಸ್ ಪಕ್ಷದ ಮೂಲಕ ಹಾಗೂ ಪಕ್ಷೇತರರಾಗಿ ಚನ್ನಪಟ್ಟಣ ನಗರಸಭೆಗೆ ಆಯ್ಕೆಯಾಗಿರುವ 2/3ರಷ್ಟು ಮೀರಿದ ಸದಸ್ಯರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೇರೆಗೆ, ಪಕ್ಷಕ್ಕೆ ವಿಲೀನತೆ ಎಂದು ಪರಿಗಣಿಸಲಾಗಿದೆ ಎಂದು ಚುನಾವಣಾಧಿಕಾರಿ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.