ಚನ್ನಪಟ್ಟಣ: ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಕೆಂಗಲ್ ಬಳಿಯ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಮಂಗಳವಾರ ಪರೀಕ್ಷಾ ಪೇ ಚರ್ಚೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಕೇಂದ್ರೀಯ ವಿದ್ಯಾಲಯ ಸಮಿತಿ, ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಪರೀಕ್ಷೆಗೆ ಸಂಬಂಧಿಸಿದ ಒತ್ತಡ ಕಡಿಮೆ ಮಾಡುವ ಕುರಿತು ಚಂದ್ರಯಾನ, ಭಾರತದ ಕ್ರೀಡಾ ಯಶಸ್ಸು, ವಿಕಾಸ್ ಭಾರತ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಆದಿತ್ಯ ಎಲ್ ಎಂಬ ಐದು ವಿಭಿನ್ನ ಅಂಶಗಳ ಕುರಿತು 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯ, ಸಿಬಿಎಸ್ಸಿ ಪಠ್ಯಕ್ರಮದ ಶಾಲೆಗಳು ಮತ್ತು ರಾಜ್ಯ ಪಠ್ಯಕ್ರಮದ ಸುಮಾರು 70ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅತ್ಯುತ್ತಮ ಚಿತ್ರಗಳನ್ನು ಬಿಡಿಸಿದ್ದ ಐದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಬಹುಮಾನ, ಪ್ರಮಾಣ ಪತ್ರ ಹಾಗೂ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ನೀಡಲಾಯಿತು. ಸ್ಪರ್ಧಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರಮಾಣಪತ್ರ ವಿತರಿಸಲಾಯಿತು.
ಶಾಲೆ ಪ್ರಾಂಶುಪಾಲ ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕುಸುಮಲತಾ, ಬಿ.ಇ.ಒ ಕಚೇರಿ ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಅವ್ವೇರಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಚಿತ್ರಕಲಾ ಶಿಕ್ಷಕ ಪೂರ್ಣಾನಂದ ಕಾರ್ಯನಿರ್ವಹಿಸಿದರು.
ಶಾಲೆ ಶಿಕ್ಷಕರಾದ ಸುಮಾಲಿನಿ, ಜಲಜಾ, ಸುನಂದ, ಶೃಂಗ, ಪ್ರತಿಭಾ, ಶಾಶ್ವತ, ಅಮಿತ್, ಇಂದು, ಅಜೀಜಾ, ನವೀದ್, ಯಶಸ್ವಿನಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.