ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ಜಾನುವಾರು ಕಾಲುಬಾಯಿ ಜ್ವರಕ್ಕೆ ಐದನೇ ಸುತ್ತಿನ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ವಿವೇಕ್ ಮಾತನಾಡಿ, ಏ.1ರಿಂದ 30ರವರೆಗೆ ತಾಲ್ಲೂಕಿನಾದ್ಯಂತ ಜಾನುವಾರು ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಲುಬಾಯಿ ಜ್ವರ ಪ್ರಾರಂಭವಾದರೆ ಅದನ್ನು ತಡೆಗಟ್ಟುವುದು ಕಷ್ಟಕರ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ರೈತರು ನಾಲ್ಕು ತಿಂಗಳ ಮೇಲ್ಪಟ್ಟ ಹಸು, ಎಮ್ಮೆಗಳಿಗೆ ಲಸಿಕೆ ಹಾಕಿಸಬಹುದು ಎಂದು ತಿಳಿಸಿದರು.
ಬೇಸಿಗೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಉಲ್ಬಣವಾಗುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ತಾಲ್ಲೂಕಿನಾದ್ಯಂತ 60 ತಂಡಗಳ ಮೂಲಕ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪಶು ಇಲಾಖೆ ವೈದ್ಯಾಧಿಕಾರಿಗಳಾದ ಡಾ.ಎ.ಎನ್.ಮಧು, ಡಾ.ಮೈತ್ರಿ, ಬಮೂಲ್ ಉಪ ವ್ಯವಸ್ಥಾಪಕ ಹೇಮಂತ್ ಕುಮಾರ್, ಜಾನುವಾರು ಅಧಿಕಾರಿಗಳಾದ ರಾಮಚಂದ್ರ, ರಾಮಲಿಂಗಯ್ಯ, ಕಾಳನಾಗೇಗೌಡ, ಕೋಡಂಬಹಳ್ಳಿ ಎಂಪಿಸಿಎಸ್ ನ ಯಶವಂತ, ಹುಚ್ಚಪ್ಪ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.