ಚನ್ನಪಟ್ಟಣ: ವಿದ್ಯಾರ್ಥಿಗಳು ಸಹಾಯ, ಸಹಕಾರ, ಪ್ರೋತ್ಸಾಹ ಮನೋಭಾವವನ್ನು ರೂಢಿಸಿಕೊಂಡು ತಮ್ಮ ಬದುಕನ್ನು ಸುಂದರವಾಗಿಸಿಕೊಂಡು ಬಾಳಬೇಕು ಎಂದು ಸಾಹಿತಿ ಎಸ್.ರಾಮಲಿಂಗೇಶ್ವರ್ ಕಿವಿಮಾತು ಹೇಳಿದರು.
ತಾಲ್ಲೂಕಿನ ಬೇವೂರುಮಂಡ್ಯ ಯೋಗಾನರಸಿಂಹಸ್ವಾಮಿ ಪ್ರೌಢಶಾಲೆಯಲ್ಲಿ ಬುದ್ಧಬಸವಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ತಲೆಮಾರಿನ ಯುವಕರು, ತಂದೆ– ತಾಯಿ, ಗುರು–ಹಿರಿಯರ ಆಶೀರ್ವಾದ ಆರೈಕೆಯಲ್ಲಿ ವಿದ್ಯೆ ಕಲಿತು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅಂತಹ ಮೌಲ್ಯಯುತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕರಾಗಿ ದುಡಿಯಬೇಕು. ಯುವಜನರನ್ನು ಮೌಢ್ಯ, ಅಂಧಕಾರದಿಂದ ಜಾಗೃತಗೊಳಿಸುವ ನಿಟ್ಟಿನಲ್ಲಿ ಸಮಸಮಾಜ ನಿರ್ಮಾಣ ಮಾಡಲು ಎಲ್ಲರೂ ಮುಂದಾಗಬೇಕು ಎಂದರು.
ಭಾರತ್ ವಿಕಾಸ್ ಪರಿಷತ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ವಸಂತ್ ಕುಮಾರ್ ಮಾತನಾಡಿ, ಹಿಂದಿನ ತಲೆಮಾರಿನ ಜನರು ಸಾಕಷ್ಟು ಕಷ್ಟ, ನಷ್ಟ ಅನುಭವಿಸಿ, ಊಟ ವಸತಿ ಇಲ್ಲದೆಯೂ ಹಿರಿಯರ ಆದರ್ಶಗಳಿಂದ ಉತ್ತಮ ಜೀವನ ನಡೆಸುತ್ತಿದ್ದರು. ಇಂದಿನ ಮಕ್ಕಳಿಗೆ ಯಾವುದೇ ಕುಂದು–ಕೊರತೆಗಳು ಉಂಟಾಗದಂತೆ ಪೋಷಕರು ನೋಡಿಕೊಳ್ಳುತ್ತಿದ್ದು, ಸಾಧನೆ ಮಾಡಲು ಮುಂದಾಗಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಚಿಕ್ಕತಿಮ್ಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ತಿಮ್ಮರಾಯಿಗೌಡ, ಸಹ ಕಾರ್ಯದರ್ಶಿ ಮಾಗನೂರು ಗಂಗರಾಜು, ತಾಲ್ಲೂಕು ಭಾವಿಪ ಕಾರ್ಯದರ್ಶಿ ವಿ.ಟಿ. ರಮೇಶ್, ಕವಿ ಕೂರಣಗೆರೆ ಕೃಷ್ಣಪ್ಪ, ಶಾಲೆಯ ಶಿಕ್ಷಕರಾದ ಸಿ.ಶಿವಲಿಂಗು, ತಿಮ್ಮೇಗೌಡ, ಇತರರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಹೇಮಲತಾ ಮತ್ತು ತಂಡದವರು ಪ್ರಾರ್ಥಿಸಿದರು.
ಶಾಲೆಯಲ್ಲಿ ಈ ಹಿಂದಿನ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಿದ್ದೇಗೌಡ ಪದ್ಮಮ್ಮ ಸ್ಮಾರಕ ದತ್ತಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.