ರಾಮನಗರ: ‘ಛತ್ರಪತಿ ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ದೇಶಭಕ್ತ ಹಾಗೂ ಹೋರಾಟಗಾರ. ತಮ್ಮ ಆಡಳಿತಾವಧಿಯಲ್ಲಿ ಎಲ್ಲಾ ಜಾತಿ ಮತ್ತು ಧರ್ಮಗಳಿಗೂ ಸಮಾನ ಆದ್ಯತೆಯನ್ನು ನೀಡುವ ಮೂಲಕ, ಜನಪರವಾಗಿ ಆಳ್ವಿಕೆ ನಡೆಸಿದ್ದರು’ ಎಂದು ರಾಮನಗರ ಜಿಲ್ಲೆ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷ ಸೋಮಶೇಖರ್ ರಾವ್ ಬಣ್ಣಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಪಾಟಿಸಿ ಅವರು ಮಾತನಾಡಿದರು.
‘ಅತ್ಯಂತ ಚಿಕ್ಕ ವಯಸ್ಸಿನಲ್ಲಿ ರಾಜನಾದ ಶಿವಾಜಿ ಅವರು, ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಪರಿಣತಿ ಹೊಂದಿದ್ದರು. ತಮ್ಮ ರಾಜ್ಯದಲ್ಲಿ ಗೆರಿಲ್ಲಾ ಪಡೆಯನ್ನೇ ಕಟ್ಟಿದ್ದರು. ಅಪ್ರತಿಮ ವೀರ ಹಾಗೂ ಯುದ್ಧ ಚತುರನಾಗಿದ್ದ ಅವರು ತಂಜಾವೂರಿನವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು’ ಎಂದರು.
‘ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಓದಬೇಕು. ಅವರ ಧೈರ್ಯ, ಸಾಹಸ ಹಾಗೂ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಹಿಂದೂಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದಿದ್ದ ಅವರು, ಪಶ್ಚಿಮ ಭಾರತವನ್ನು ಆಳಿದ್ದರು. ಅವರ ಶೌರ್ಯ ಮತ್ತು ಆಡಳಿತ ವೈಖರಿ ಇಂದಿನ ಆಡಳಿತಗಾರರಿಗೆ ಪ್ರೇರಣೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಕ್ಷತ್ರೀಯ ಮರಾಠ ಪರಿಷತ್ ಉಪಾಧ್ಯಕ್ಷ ಯಶವಂತ್ರಾವ್ ಗಡ್ದೆ, ಸಿದ್ದೋಜಿರಾವ್, ಕಾರ್ಯದರ್ಶಿ ಶ್ರೀನಿವಾಸ್ ನಲಿಗೆ, ಖಜಾಂಜಿ ಶಂಕರ್ ರಾವ್, ಪರಿಷತ್ನ ಚನ್ನಪಟ್ಟಣ ಅಧ್ಯಕ್ಷ ಲಕ್ಷ್ಮಣರಾವ್, ಉಪಾಧ್ಯಕ್ಷ ಕೃಷ್ಣೋಜಿರಾವ್, ಪದಾಧಿಕಾರಿಗಳಾದ ಚಂದನ್ ಮೊರೆ, ಲೋಕೇಶ್ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.