ಮಾಗಡಿ: ಪಟ್ಟಣದ ಮಾರುತಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಮಂಗಳವಾರ ಕಾಲೇಜಿನ ಆವರಣದಲ್ಲಿ ವಾಣಿಜ್ಯ ಮೇಳ ನಡೆಯಿತು.
ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಮಾರುತಿ ಸಮೂಹ ವಿದ್ಯಾಸಂಸ್ಥೆ ಕಾರ್ಯದರ್ಶಿ ವರಲಕ್ಷ್ಮೀ ಗಂಗರಾಜು, ಕಲಿಕೆಯ ಜೊತೆಗೆ ಗಳಿಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸುವ ಉದ್ದೇಶದಿಂದ ವಾಣಿಜ್ಯ ಮೇಳೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ವಾಣಿಜ್ಯ ಮೇಳವು ಒಂದು ಹೋಮ್ ವರ್ಕನಂತೆ ಅಚ್ಚುಕಟ್ಟಾಗಿ ತಿನನಿಸುಗಳನ್ನು ಮಾರಾಟ ಮಾಡಿದ್ದು ನೋಡಿದರೆ ಭವಿಷ್ಯದಲ್ಲಿ ನಮ್ಮ ಮಕ್ಕಳು ಉತ್ತಮ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಲಿದ್ದಾರೆ ಎಂದರು.
ವಾಣಿಜ್ಯ ಪದವಿ ವಿಭಾಗದ ಮುಖ್ಯಸ್ಥೆ ಮೇಘಶ್ರೀ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿದರೆ, ಸಂವಹನ ಕಲೆ ಕಲಿಸಿಕೊಟ್ಟರೆ ಉದ್ಯಮ ಆರಂಭಿಸಿ ವ್ಯಾಪಾರ ವಹಿವಾಟು ನಡೆಸುವ ಎಲ್ಲಾ ಲಕ್ಷಣಗಳಿವೆ ಎಂದರು.
ಮಾರುತಿ ಪದವಿ ಪೂರ್ವ ಕಾಲೇಜು ವಿಭಾಗದ ಮುಖ್ಯಸ್ಥ ತೇಜಸ್ ಮಾತನಾಡಿ, ಮಕ್ಕಳಿಗೆ ಕೇವಲ ಪುಸ್ತಕ ಜ್ಞಾನವಷ್ಠೇ ಸಾಲದು, ವ್ಯವಹಾರ ಜ್ಞಾನ, ವಸ್ತುಗಳನ್ನು ಕೊಳ್ಳುವ, ಮಾರಾಟ ಮಾಡುವ, ಗ್ರಾಹಕರೊಂದಿಗೆ ಸಂವಹನ ನಡೆಸುವುದರನ್ನು ಕಲಿಸಿಕೊಡುವ ಉದ್ದೇಶದಿಂದ ವಾಣಿಜ್ಯ ಮೇಳ ನಡೆಸಿದೆವು. ಸಂಸ್ಥಾಪಕ ಎಚ್.ಎಚ್.ಗಂಗರಾಜು ಅವರ ಪ್ರೋತ್ಸಾಹ ಮೇಳ ಯಶಸ್ವಿಯಾಗಲು ಕಾರಣವಾಯಿತು ಎಂದರು.
ವಾಣಿಜ್ಯ ಪದವಿ ವಿದ್ಯಾರ್ಥಿಗಳು 23 ಸ್ಟಾಲ್ಗಳಲ್ಲಿ ವಿವಿಧ ಬಗೆಯ ತಿಂಡಿ, ತಿನಿಸು, ಕತ್ತರಿಸಿ ಜೋಡಿಸಿದ್ದ ಹಣ್ಣುಹಂಪಲು, ಮನೆಯಲ್ಲಿ ಮಾಡಿಕೊಂಡು ತಂದಿದ್ದ ಚಕ್ಕುಲಿ, ಲಾಡು, ಕಾರ ಸೇವಿಗೆ, ಬಜ್ಜಿ, ಬೋಂಡಾ, ನಿಂಬೆ, ಬೇಲದ ಹಣ್ಣಿನ ಜ್ಯೂಸ್, ಮಸಾಲೆ ಮಜ್ಜಿಗೆ, ಪಾನಕ, ಬೇಯಿಸಿದ ಮುಸುಕಿನ ಜೋಳಕ್ಕೆ ಮಸಾಲೆ ಬೆರೆಸಿ ತಯಾರಿಸಿದ್ದ ತಿನಿಸು, ಪಾನಿಪುರಿ, ನಿಪ್ಪಟ್ಟು ನೋಡುಗರ ಬಾಯಲ್ಲಿ ನೀರೂರಿಸಿದವು.
ಶೃಂಗಾರ ಸಾಧನಗಳು, ಮನೆಯಲ್ಲಿ ಹೆಣಿಗೆ ಮಾಡಿದ್ದ ಮಣಿಹಾರ, ಬಳೆ, ಸರ, ಅಲಂಕಾರಿಕ ಕಿವಿ ಓಲೆ, ಪೋಟೋ ಫ್ರೇಮ್ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡಿದರು. ವಿದ್ಯಾರ್ಥಿನಿಯರು ತಾವೇ ತಯಾರಿಸಿದ್ದ ಸಿಹಿ ತಿನುಸುಗಳನ್ನು ಅಧಿಕ ಮಾರಾಟ ಮಾಡಿ ಮೆಚ್ಚುಗೆ ಗಳಿಸಿದರು.
ಮಾರುತಿ ಪದವಿ, ಪದವಿ ಪೂರ್ವ, ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ ಶಿಕ್ಷಕ-ಶಿಕ್ಷಕಿಯರು, ಉಪಾನ್ಯಾಸಕರು,ಶಾಲೆಯ ಸಂಸ್ಥಾಪಕರು, ಸಿಬ್ಬಂದಿ ಮತ್ತು ಮಕ್ಕಳು ವಿದ್ಯಾರ್ಥಿಗಳೆ ಗ್ರಾಹಕರಾಗಿ ವಾಣಿಜ್ಯ ಮೇಳದಲ್ಲಿ ಖರೀದಿಸಿದ್ದರು.
ಉಪನ್ಯಾಸಕರಾದ ಮಂಜುಳಾ, ಅನಿತಾ, ಪದ್ಮಾವತಿ, ಮಾಲಾ, ಪುನೀತ್, ಮನುಜಾ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ನರಸಿಂಹಯ್ಯ ಹಾಗೂ ಶಿಕ್ಷಕರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.